عَنْ جَابِرٍ رضي الله عنه قال: أَخْبَرَنِي عُمَرُ بْنُ الْخَطَّابِ:
أَنَّ رَجُلًا تَوَضَّأَ فَتَرَكَ مَوْضِعَ ظُفُرٍ عَلَى قَدَمِهِ فَأَبْصَرَهُ النَّبِيُّ صَلَّى اللهُ عَلَيْهِ وَسَلَّمَ فَقَالَ: «ارْجِعْ فَأَحْسِنْ وُضُوءَكَ» فَرَجَعَ، ثُمَّ صَلَّى.

[صحيح بشواهده] - [رواه مسلم] - [صحيح مسلم: 243]
المزيــد ...

ಜಾಬಿರ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ: ಉಮರ್ ಬಿನ್ ಖತ್ತಾಬ್ ನನಗೆ ತಿಳಿಸಿದರು:
ಒಬ್ಬ ವ್ಯಕ್ತಿ ವುದೂ ನಿರ್ವಹಿಸಿದರು ಮತ್ತು ತನ್ನ ಪಾದದಲ್ಲಿ ಉಗುರಿನ ಗಾತ್ರದ ಸ್ಥಳವನ್ನು ಬಿಟ್ಟುಬಿಟ್ಟರು. ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಅದನ್ನು ನೋಡಿ ಹೇಳಿದರು: "ಹಿಂದಿರುಗಿ ಹೋಗು ಮತ್ತು ಅತ್ಯುತ್ತಮವಾಗಿ ವುದೂ ನಿರ್ವಹಿಸು." ಆ ವ್ಯಕ್ತಿ ಹಿಂದಿರುಗಿ ಹೋಗಿ, ನಂತರ ನಮಾಝ್ ನಿರ್ವಹಿಸಿದರು.

[صحيح بشواهده] - [رواه مسلم] - [صحيح مسلم - 243]

ವಿವರಣೆ

ಉಮರ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರವರು ಇಲ್ಲಿ ತಿಳಿಸುವುದೇನೆಂದರೆ, ಒಬ್ಬ ವ್ಯಕ್ತಿ ವುದೂ ಮುಗಿಸಿದಾಗ ಅವನ ಪಾದದಲ್ಲಿ ಉಗುರಿನ ಗಾತ್ರದ ಸ್ಥಳವನ್ನು ನೀರು ತಾಗಿಸದೆ ಬಿಟ್ಟದ್ದನ್ನು ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಗಮನಿಸಿದರು. ಆತ ಅಪೂರ್ಣವಾಗಿ ವುದೂ ನಿರ್ವಹಿಸಿದ ಆ ಸ್ಥಳವನ್ನು ತೋರಿಸುತ್ತಾ ಅವರು ಹೇಳಿದರು: "ಹಿಂದಿರುಗಿ ಹೋಗು ಮತ್ತು ಅತ್ಯುತ್ತಮವಾಗಿ ಮತ್ತು ಪೂರ್ಣವಾಗಿ ವುದೂ ನಿರ್ವಹಿಸು. ಪ್ರತಿಯೊಂದು ಅಂಗಕ್ಕೂ ಅದರ ನೀರಿನ ಹಕ್ಕನ್ನು ನೀಡು." ಆ ವ್ಯಕ್ತಿ ಹಿಂದಿರುಗಿ ಹೋಗಿ, ವುದೂವನ್ನು ಪೂರ್ಣಗೊಳಿಸಿ, ನಂತರ ನಮಾಝ್ ನಿರ್ವಹಿಸಿದರು.

ಹದೀಸಿನ ಪ್ರಯೋಜನಗಳು

  1. ಒಳಿತನ್ನು ಆದೇಶಿಸಲು ಮತ್ತು ಅಜ್ಞಾನಿಗಳಿಗೆ ಹಾಗೂ ನಿರ್ಲಕ್ಷ್ಯ ವಹಿಸುವವರಿಗೆ ಮಾರ್ಗನಿರ್ದೇಶನ ನೀಡಲು ತ್ವರೆ ಮಾಡುವುದು ಕಡ್ಡಾಯವಾಗಿದೆ. ವಿಶೇಷವಾಗಿ ಅವರ ಪ್ರಮಾದವು ಆರಾಧನೆಯನ್ನು ನಿಷ್ಫಲಗೊಳಿಸುವ ರೀತಿಯಲ್ಲಿದ್ದರೆ.
  2. ವುದೂವಿನ ಎಲ್ಲಾ ಅಂಗಗಳಿಗೂ ನೀರನ್ನು ತಲುಪಿಸುವುದು ಕಡ್ಡಾಯವಾಗಿದೆ. ಯಾವುದೇ ಅಂಗದ ಒಂದು ಭಾಗವನ್ನು—ಅದು ಚಿಕ್ಕ ಭಾಗವಾದರೂ ಸರಿ—ಬಿಟ್ಟರೆ ಅವನ ವುದೂ ಸಿಂಧುವಾಗುವುದಿಲ್ಲ. ವುದೂ ನಿರ್ವಹಿಸಿ ತುಂಬಾ ಹೊತ್ತು ಕಳೆದಿದ್ದರೆ ವುದೂವನ್ನು ಪುನಃ ನಿರ್ವಹಿಸುವುದು ಕಡ್ಡಾಯವಾಗಿದೆ.
  3. ಅತ್ಯುತ್ತಮವಾಗಿ ವುದೂ ನಿರ್ವಹಿಸಬೇಕೆಂದು ಶರಿಯತ್ (ಧರ್ಮಶಾಸ್ತ್ರ) ಆದೇಶಿಸಿದೆ. ಅದು ಹೇಗೆಂದರೆ, ವುದೂವನ್ನು ಪೂರ್ಣವಾಗಿ ಮತ್ತು ಶಾಸ್ತ್ರವು ಆದೇಶಿಸಿದ ರೀತಿಯಲ್ಲಿ ನಿರ್ವಹಿಸುವುದು.
  4. ಎರಡು ಪಾದಗಳು ವುದೂವಿನ ಅಂಗಗಳಲ್ಲಿ ಒಳಪಡುತ್ತವೆ. ಅವುಗಳ ಮೇಲೆ ಸವರಿದರೆ ಸಾಕಾಗುವುದಿಲ್ಲ. ಬದಲಿಗೆ, ಅವುಗಳನ್ನು ತೊಳೆಯುವುದು ಕಡ್ಡಾಯವಾಗಿದೆ.
  5. ವುದೂವಿನ ಅಂಗಗಳ ನಡುವೆ ಮುಂದುವರಿಕೆ (ಮುವಾಲಾತ್) ಕಾಪಾಡಬೇಕು. ಅಂದರೆ ಪ್ರತಿಯೊಂದು ಅಂಗವನ್ನು ಅದಕ್ಕಿಂತ ಮೊದಲು ತೊಳೆದ ಅಂಗವು ಒಣಗುವ ಮೊದಲು ತೊಳೆಯಬೇಕು.
  6. ಅಜ್ಞಾನ ಮತ್ತು ಮರೆವು ಕಡ್ಡಾಯ ಕಾರ್ಯದಿಂದ ವಿನಾಯಿತಿ ನೀಡುವುದಿಲ್ಲ. ಅವು ಪಾಪಕೃತ್ಯದಿಂದ ಮಾತ್ರ ವಿನಾಯಿತಿ ನೀಡುತ್ತದೆ. ಅಜ್ಞಾನದಿಂದಾಗಿ ಸರಿಯಾಗಿ ವುದೂ ನಿರ್ವಹಿಸದ ಈ ವ್ಯಕ್ತಿಗೆ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಕಡ್ಡಾಯ ಕಾರ್ಯದಿಂದ, ಅಂದರೆ ವುದೂ ನಿರ್ವಹಿಸುವುದರಿಂದ ವಿನಾಯಿತಿ ನೀಡಲಿಲ್ಲ. ಅವರು ಆತನಿಗೆ ಪುನಃ ವುದೂ ನಿರ್ವಹಿಸುವಂತೆ ಆದೇಶಿಸಿದರು.
ಅನುವಾದಗಳನ್ನು ತೋರಿಸಿ
ಭಾಷೆ: ಆಂಗ್ಲ ಉರ್ದು ಸ್ಪ್ಯಾನಿಷ್ ಇನ್ನಷ್ಟು (55)