+ -

عَنْ أَبِي هُرَيْرَةَ رَضِيَ اللَّهُ عَنْهُ:
أَنَّ أَعْرَابِيًّا أَتَى النَّبِيَّ صَلَّى اللهُ عَلَيْهِ وَسَلَّمَ، فَقَالَ: دُلَّنِي عَلَى عَمَلٍ إِذَا عَمِلْتُهُ دَخَلْتُ الجَنَّةَ، قَالَ: «تَعْبُدُ اللَّهَ لاَ تُشْرِكُ بِهِ شَيْئًا، وَتُقِيمُ الصَّلاَةَ المَكْتُوبَةَ، وَتُؤَدِّي الزَّكَاةَ المَفْرُوضَةَ، وَتَصُومُ رَمَضَانَ» قَالَ: وَالَّذِي نَفْسِي بِيَدِهِ لاَ أَزِيدُ عَلَى هَذَا، فَلَمَّا وَلَّى قَالَ النَّبِيُّ صَلَّى اللهُ عَلَيْهِ وَسَلَّمَ: «مَنْ سَرَّهُ أَنْ يَنْظُرَ إِلَى رَجُلٍ مِنْ أَهْلِ الجَنَّةِ، فَلْيَنْظُرْ إِلَى هَذَا».

[صحيح] - [متفق عليه] - [صحيح البخاري: 1397]
المزيــد ...

ಅಬೂ ಹುರೈರ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ.
ಒಬ್ಬ ಅಲೆಮಾರಿ ಅರಬ್ಬನು ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಬಳಿಗೆ ಬಂದು ಹೇಳಿದನು: "ನಾನು ಆ ಕಾರ್ಯವನ್ನು ಮಾಡಿದರೆ ಸ್ವರ್ಗವನ್ನು ಪ್ರವೇಶಿಸುವಂತಹ ಒಂದು ಕಾರ್ಯದ ಬಗ್ಗೆ ನನಗೆ ತಿಳಿಸಿಕೊಡಿ." ಅವರು ಹೇಳಿದರು: "ಅಲ್ಲಾಹನನ್ನು ಆರಾಧಿಸು, ಅವನೊಂದಿಗೆ ಏನನ್ನೂ ಸಹಭಾಗಿಯಾಗಿ ಮಾಡಬೇಡ, ಕಡ್ಡಾಯ ನಮಾಝನ್ನು ಸಂಸ್ಥಾಪಿಸು, ಕಡ್ಡಾಯ ಝಕಾತನ್ನು ನೀಡು, ರಮದಾನ್ ತಿಂಗಳಲ್ಲಿ ಉಪವಾಸವನ್ನು ಆಚರಿಸು." ಅವನು ಹೇಳಿದನು: "ನನ್ನ ಆತ್ಮ ಯಾರ ಕೈಯಲ್ಲಿದೆಯೋ ಅವನ ಮೇಲಾಣೆ! ನಾನು ಇದಕ್ಕಿಂತ ಹೆಚ್ಚಿಗೆ ಏನೂ ಮಾಡುವುದಿಲ್ಲ." ಅವನು ತಿರುಗಿ ಹೋದ ನಂತರ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಸ್ವರ್ಗವಾಸಿಗಳಲ್ಲಿ ಸೇರಿದ ವ್ಯಕ್ತಿಯನ್ನು ನೋಡಲು ಸಂತೋಷಪಡುವವರು ಇವನನ್ನು ನೋಡಲಿ."

[صحيح] - [متفق عليه] - [صحيح البخاري - 1397]

ವಿವರಣೆ

ಗ್ರಾಮೀಣ ಪ್ರದೇಶದ ಒಬ್ಬ ವ್ಯಕ್ತಿ ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಬಳಿಗೆ ಬಂದು ತನ್ನನ್ನು ಸ್ವರ್ಗಕ್ಕೆ ಪ್ರವೇಶಗೊಳಿಸುವ ಒಂದು ಕರ್ಮದ ಬಗ್ಗೆ ಮಾರ್ಗದರ್ಶನ ಮಾಡಬೇಕೆಂದು ಕೇಳಿಕೊಂಡನು. ಆಗ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಅವನಿಗೆ ಉತ್ತರಿಸಿದ್ದೇನೆಂದರೆ, ಸ್ವರ್ಗ ಪ್ರವೇಶ ಮತ್ತು ನರಕ ವಿಮೋಚನೆಯು ಇಸ್ಲಾಮಿನ ಸ್ತಂಭಗಳನ್ನು ನಿರ್ವಹಿಸುವುದರ ಮೇಲೆ ಅವಲಂಬಿತವಾಗಿದೆ. ಅಂದರೆ, ಅಲ್ಲಾಹನನ್ನು ಮಾತ್ರ ಆರಾಧಿಸುವುದು ಹಾಗೂ ಅವನೊಂದಿಗೆ ಏನನ್ನೂ ಸಹಭಾಗಿಯಾಗಿ ಮಾಡದಿರುವುದು. ಎಲ್ಲಾ ದಿನ ರಾತ್ರಿಗಳಲ್ಲಿ ಅಲ್ಲಾಹು ತನ್ನ ದಾಸರ ಮೇಲೆ ಕಡ್ಡಾಯಗೊಳಿಸಿದ ಐದು ವೇಳೆಯ ನಮಾಝ್‌ಗಳನ್ನು ಸಂಸ್ಥಾಪಿಸುವುದು. ಅಲ್ಲಾಹು ನಿನಗೆ ಕಡ್ಡಾಯಗೊಳಿಸಿದ ಸಂಪತ್ತಿನ ಝಕಾತನ್ನು ಅದರ ಹಕ್ಕುದಾರರಿಗೆ ನೀಡುವುದು. ರಮದಾನ್ ತಿಂಗಳಲ್ಲಿ ಉಪವಾಸವನ್ನು ಆಚರಿಸುವುದು. ಆಗ ಆ ವ್ಯಕ್ತಿ ಹೇಳಿದನು: ನನ್ನ ಆತ್ಮ ಯಾರ ಕೈಯಲ್ಲಿದೆಯೋ ಅವನ ಮೇಲಾಣೆ! ನೀವು ನನಗೆ ತಿಳಿಸಿಕೊಟ್ಟ ಈ ಕಡ್ಡಾಯ ಆರಾಧನೆಗಳಿಗಿಂತ ಹೆಚ್ಚಿಗೆ ನಾನೇನೂ ನಿರ್ವಹಿಸುವುದಿಲ್ಲ ಮತ್ತು ಇದರಲ್ಲಿ ಕಡಿತವನ್ನೂ ಮಾಡುವುದಿಲ್ಲ. ಆತ ಹಿಂದಿರುಗಿ ಹೋದಾಗ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: ಸ್ವರ್ಗವಾಸಿಗಳಲ್ಲಿ ಸೇರಿದ ಒಬ್ಬ ವ್ಯಕ್ತಿಯನ್ನು ನೋಡಲು ಸಂತೋಷಪಡುವವರು ಈ ಅಲೆಮಾರಿ ಅರಬ್ಬನನ್ನು ನೋಡಲಿ.

ಅನುವಾದ: ಆಂಗ್ಲ ಉರ್ದು ಸ್ಪ್ಯಾನಿಷ್ ಇಂಡೋನೇಷಿಯನ್ ಉಯ್ಘರ್ ಬಂಗಾಳಿ ಫ್ರೆಂಚ್ ತುರ್ಕಿ ರಷ್ಯನ್ ಬೊಸ್ನಿಯನ್ ಸಿಂಹಳೀಯ ಹಿಂದಿ ಚೀನೀ ಪರ್ಷಿಯನ್ ವಿಯೆಟ್ನಾಮೀಸ್ ಟ್ಯಾಗಲಾಗ್ ಕುರ್ದಿಷ್ ಹೌಸಾ ಪೋರ್ಚುಗೀಸ್ ಮಲಯಾಳಂ ತೆಲುಗು ಸ್ವಾಹಿಲಿ ಥಾಯ್ ಪಶ್ತೋ الأسامية السويدية الأمهرية الهولندية الغوجاراتية القيرقيزية النيبالية اليوروبا الدرية الصربية الصومالية الكينياروندا الرومانية التشيكية المالاجاشية الأورومو
ಅನುವಾದಗಳನ್ನು ತೋರಿಸಿ

ಹದೀಸಿನ ಪ್ರಯೋಜನಗಳು

  1. ಅಲ್ಲಾಹನ ಕಡೆಗೆ ಆಮಂತ್ರಿಸುವಾಗ ಮೊತ್ತಮೊದಲು ಆರಾಧನೆಗಳನ್ನು ಅಲ್ಲಾಹನಿಗೆ ಮಾತ್ರ ಅರ್ಪಿಸುವಲ್ಲಿಂದಲೇ ಆರಂಭಿಸಬೇಕು.
  2. ಹೊಸದಾಗಿ ಇಸ್ಲಾಂ ಸ್ವೀಕರಿಸುವವರಿಗೆ ಕಡ್ಡಾಯ ಕಾರ್ಯಗಳನ್ನು ಮಾತ್ರ ಕಲಿಸಿಕೊಟ್ಟರೆ ಸಾಕು.
  3. ಅಲ್ಲಾಹನ ಕಡೆಗೆ ಆಮಂತ್ರಿಸುವುದು ಹಂತ ಹಂತವಾಗಿರಬೇಕು.
  4. ಧಾರ್ಮಿಕ ವಿಷಯಗಳನ್ನು ಕಲಿಯುವ ಬಗ್ಗೆ ಆ ವ್ಯಕ್ತಿಗಿದ್ದ ಉತ್ಸಾಹವನ್ನು ತಿಳಿಸಲಾಗಿದೆ.
  5. ಮುಸ್ಲಿಮನು ಕಡ್ಡಾಯ ಕಾರ್ಯಗಳನ್ನು ಮಾತ್ರ ಮಾಡಿದರೆ ಯಶಸ್ವಿಯಾಗುತ್ತಾನೆ. ಆದರೆ ಇದರ ಅರ್ಥ ಐಚ್ಛಿಕ ವಿಷಯಗಳ ಬಗ್ಗೆ ಅಸಡ್ಡೆ ತೋರಬೇಕೆಂದಲ್ಲ. ಏಕೆಂದರೆ, ಐಚ್ಛಿಕ ಕಾರ್ಯಗಳು ಕಡ್ಡಾಯ ಕಾರ್ಯಗಳಲ್ಲಿ ಉಂಟಾಗುವ ಕೊರತೆಗಳನ್ನು ಪೂರ್ಣಗೊಳಿಸುತ್ತವೆ.
  6. ಕೆಲವು ಆರಾಧನೆಗಳನ್ನು ವಿಶೇಷವಾಗಿ ಪ್ರಸ್ತಾಪಿಸಲಾಗಿರುವುದು ಅವುಗಳ ಪ್ರಾಮುಖ್ಯತೆ ಮತ್ತು ಮಹತ್ವವನ್ನು ತಿಳಿಸುತ್ತದೆಯೇ ವಿನಾ ಇತರ ಕಾರ್ಯಗಳು ಕಡ್ಡಾಯವಲ್ಲ ಎಂದು ತಿಳಿಸುವುದಿಲ್ಲ.
ಇನ್ನಷ್ಟು