+ -

عَنْ سَعْدٍ رضي الله عنها قَالَ:
جَاءَ أَعْرَابِيٌّ إِلَى رَسُولِ اللهِ صَلَّى اللهُ عَلَيْهِ وَسَلَّمَ، فَقَالَ: عَلِّمْنِي كَلَامًا أَقُولُهُ، قَالَ: «قُلْ: لَا إِلَهَ إِلَّا اللهُ وَحْدَهُ لَا شَرِيكَ لَهُ، اللهُ أَكْبَرُ كَبِيرًا، وَالْحَمْدُ لِلَّهِ كَثِيرًا، سُبْحَانَ اللهِ رَبِّ الْعَالَمِينَ، لَا حَوْلَ وَلَا قُوَّةَ إِلَّا بِاللهِ الْعَزِيزِ الْحَكِيمِ» قَالَ: فَهَؤُلَاءِ لِرَبِّي، فَمَا لِي؟ قَالَ: «قُلْ: اللهُمَّ اغْفِرْ لِي وَارْحَمْنِي وَاهْدِنِي وَارْزُقْنِي».

[صحيح] - [رواه مسلم] - [صحيح مسلم: 2696]
المزيــد ...

ಸಅದ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು:
ಒಬ್ಬ ಅಲೆಮಾರಿ ಅರಬ್ಬ ಅಲ್ಲಾಹನ ಸಂದೇಶವಾಹಕರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಬಳಿಗೆ ಬಂದು ಹೇಳಿದನು: “ನನಗೆ ಹೇಳಲು ಕೆಲವು ಪದಗಳನ್ನು ಕಲಿಸಿರಿ.” ಅವರು ಹೇಳಿದರು, “ಹೇಳು: ‘ಅಲ್ಲಾಹನ ಹೊರತು ಆರಾಧನೆಗೆ ಅರ್ಹರಾದ ಬೇರೆ ದೇವರಿಲ್ಲ, ಅವನು ಏಕೈಕನು ಮತ್ತು ಸಹಭಾಗಿಗಳಿಲ್ಲದವನು, ಅಲ್ಲಾಹು ಅತ್ಯಂತ ಮಹಾನನು ಮತ್ತು ಸರ್ವೋನ್ನತನು, ಸರ್ವಸ್ತುತಿಗಳು ಹೇರಳವಾಗಿ ಅಲ್ಲಾಹನಿಗೆ, ಸರ್ವಲೋಕಗಳ ಪರಿಪಾಲಕನಾದ ಅಲ್ಲಾಹು ಪರಿಶುದ್ಧನಾಗಿದ್ದಾನೆ. ಪ್ರಚಂಡ ಶಕ್ತಿಶಾಲಿ ಮತ್ತು ಪರಮ ಜ್ಞಾನಿಯಾದ ಅಲ್ಲಾಹನ ಹೊರತು ಬೇರೆ ಶಕ್ತಿ ಅಥವಾ ಸಾಮರ್ಥ್ಯವಿಲ್ಲ.’” ಅವನು ಹೇಳಿದನು: “ಈ ಪದಗಳೆಲ್ಲವೂ ನನ್ನ ಪರಿಪಾಲಕನಿಗೆ, ಹಾಗಾದರೆ ನನಗೇನಿದೆ?” ಅವರು ಹೇಳಿದರು, “ಹೇಳು: ‘ಓ ಅಲ್ಲಾಹ್! ನನ್ನನ್ನು ಕ್ಷಮಿಸು, ನನ್ನ ಮೇಲೆ ಕರುಣೆ ತೋರು, ನನಗೆ ಮಾರ್ಗದರ್ಶನ ಮಾಡು, ಮತ್ತು ನನಗೆ ಉಪಜೀವನವನ್ನು ಒದಗಿಸು.’”

[صحيح] - [رواه مسلم] - [صحيح مسلم - 2696]

ವಿವರಣೆ

ಮರುಭೂಮಿಯಲ್ಲಿ ವಾಸಿಸುವ ಒಬ್ಬ ವ್ಯಕ್ತಿ ಅಲ್ಲಾಹನ ಸಂದೇಶವಾಹಕರೊಡನೆ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ), ಪಠಿಸಲು ಯಾವುದಾದರೂ ಸ್ಮರಣೆಯನ್ನು ಕಲಿಸಿಕೊಡಲು ವಿನಂತಿಸಿದನು. ಆಗ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಹೇಳು: "ಅಲ್ಲಾಹನ ಹೊರತು ಆರಾಧನೆಗೆ ಅರ್ಹರಾದ ಬೇರೆ ದೇವರಿಲ್ಲ, ಅವನು ಏಕೈಕನು ಮತ್ತು ಸಹಭಾಗಿಗಳಿಲ್ಲದವನು." ಅವರು ಏಕದೇವವಿಶ್ವಾಸದ ಸಾಕ್ಷ್ಯದಿಂದ ಆರಂಭಿಸಿದರು. ಆರಾಧನೆಗೆ ಅರ್ಹರಾದ ಅನ್ಯ ದೇವರಿಲ್ಲ ಎಂಬುದು ಅದರ ಅರ್ಥ. "ಅಲ್ಲಾಹು ಅತ್ಯಂತ ಮಹಾನನು ಮತ್ತು ಸರ್ವೋನ್ನತನು." ಅಂದರೆ, ಅಲ್ಲಾಹು ಎಲ್ಲಾ ವಸ್ತುಗಳಿಗಿಂತಲೂ ದೊಡ್ಡವನು ಮತ್ತು ಮಹಾನನು. "ಸರ್ವಸ್ತುತಿಗಳು ಹೇರಳವಾಗಿ ಅಲ್ಲಾಹನಿಗೆ." ಅಂದರೆ, ಅವನ ಗುಣಲಕ್ಷಣಗಳು, ಕ್ರಿಯೆಗಳು ಮತ್ತು ಅಸಂಖ್ಯ ಅನುಗ್ರಹಗಳಿಗಾಗಿ ಅವನಿಗೆ ಹೇರಳವಾದ ಸ್ತುತಿಗಳು. "ಸರ್ವಲೋಕಗಳ ಪರಿಪಾಲಕನಾದ ಅಲ್ಲಾಹು ಪರಿಶುದ್ಧನಾಗಿದ್ದಾನೆ." ಅಂದರೆ, ಅವನು ಎಲ್ಲಾ ನ್ಯೂನತೆಗಳಿಂದ ಮುಕ್ತನು ಮತ್ತು ಪರಿಶುದ್ಧನಾಗಿದ್ದಾನೆ. "ಪ್ರಚಂಡ ಶಕ್ತಿಶಾಲಿ ಮತ್ತು ಪರಮ ಜ್ಞಾನಿಯಾದ ಅಲ್ಲಾಹನ ಹೊರತು ಬೇರೆ ಶಕ್ತಿ ಅಥವಾ ಸಾಮರ್ಥ್ಯವಿಲ್ಲ." ಅಂದರೆ, ಅಲ್ಲಾಹನ ಸಹಾಯ ಮತ್ತು ಮಾರ್ಗದರ್ಶನವಿಲ್ಲದೆ ಒಂದು ಸ್ಥಿತಿಯಿಂದ ಇನ್ನೊಂದು ಸ್ಥಿತಿಗೆ ಪರಿವರ್ತನೆ ಹೊಂದಲು ಸಾಧ್ಯವಿಲ್ಲ. ಆಗ ಆ ವ್ಯಕ್ತಿ ಕೇಳಿದನು: "ಈ ಪದಗಳೆಲ್ಲವೂ ನನ್ನ ಪರಿಪಾಲಕನನ್ನು ಸ್ಮರಿಸಲು ಮತ್ತು ಮಹಿಮೆಪಡಿಸಲು ಇರುವುದಾಗಿವೆ. ನನ್ನ ಸ್ವಂತಕ್ಕಾಗಿ ಪ್ರಾರ್ಥಿಸಲು ಏನಿದೆ?" ಆಗ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಹೇಳು: "ಓ ಅಲ್ಲಾಹ್! ನನ್ನನ್ನು ಕ್ಷಮಿಸು." ಪಾಪಗಳನ್ನು ಅಳಿಸಿ ಮರೆಮಾಚುವ ಮೂಲಕ. “ನನ್ನ ಮೇಲೆ ಕರುಣೆ ತೋರು.” ಧಾರ್ಮಿಕ ಮತ್ತು ಭೌತಿಕ ಲಾಭಗಳನ್ನು ಮತ್ತು ಕ್ಷೇಮಗಳನ್ನು ನನಗೆ ತಲುಪಿಸುವ ಮೂಲಕ. "ನನಗೆ ಮಾರ್ಗದರ್ಶನ ಮಾಡು." ಅತ್ಯುತ್ತಮ ಸ್ಥಿತಿಗೆ ಮತ್ತು ನೇರ ಮಾರ್ಗಕ್ಕೆ. "ನನಗೆ ಉಪಜೀವನವನ್ನು ಒದಗಿಸು." ಧರ್ಮಸಮ್ಮತವಾದ ಸಂಪತ್ತು, ಆರೋಗ್ಯ ಮತ್ತು ಎಲ್ಲಾ ಒಳಿತುಗಳು ಹಾಗೂ ಸೌಖ್ಯಗಳು.

ಅನುವಾದ: ಆಂಗ್ಲ ಉರ್ದು ಸ್ಪ್ಯಾನಿಷ್ ಇಂಡೋನೇಷಿಯನ್ ಉಯ್ಘರ್ ಫ್ರೆಂಚ್ ತುರ್ಕಿ ರಷ್ಯನ್ ಬೊಸ್ನಿಯನ್ ಸಿಂಹಳೀಯ ಹಿಂದಿ ಚೀನೀ ಪರ್ಷಿಯನ್ ವಿಯೆಟ್ನಾಮೀಸ್ ಕುರ್ದಿಷ್ ಹೌಸಾ ಪೋರ್ಚುಗೀಸ್ ಮಲಯಾಳಂ ತೆಲುಗು ಸ್ವಾಹಿಲಿ ಥಾಯ್ ಪಶ್ತೋ الأسامية السويدية الأمهرية الهولندية الغوجاراتية القيرقيزية النيبالية اليوروبا الليتوانية الدرية الصربية الصومالية الكينياروندا الرومانية التشيكية المالاجاشية الأورومو
ಅನುವಾದಗಳನ್ನು ತೋರಿಸಿ

ಹದೀಸಿನ ಪ್ರಯೋಜನಗಳು

  1. ತಹ್ಲೀಲ್ (ಲಾ ಇಲಾಹ ಇಲ್ಲಲ್ಲಾಹ್), ತಕ್ಬೀರ್ (ಅಲ್ಲಾಹು ಅಕ್ಬರ್), ತಹ್ಮೀದ್ (ಅಲ್-ಹಮ್ದುಲಿಲ್ಲಾಹ್) ಮತ್ತು ತಸ್ಬೀಹ್ (ಸುಬ್‌ಹಾನಲ್ಲಾಹ್) ಹೇಳುವ ಮೂಲಕ ಅಲ್ಲಾಹನನ್ನು ಸ್ಮರಿಸಲು ಪ್ರೋತ್ಸಾಹಿಸಲಾಗಿದೆ.
  2. ಪ್ರಾರ್ಥಿಸುವ ಮೊದಲು ಅಲ್ಲಾಹನನ್ನು ಸ್ಮರಿಸುವುದು ಮತ್ತು ಪ್ರಶಂಸಿಸುವುದು ಅಪೇಕ್ಷಣೀಯವಾಗಿದೆ.
  3. ಪ್ರಾರ್ಥಿಸುವಾಗ ಅತ್ಯಂತ ಶುದ್ಧವಾದ ಪ್ರಾರ್ಥನೆಗಳನ್ನು ಮತ್ತು ಇಹಲೋಕ ಮತ್ತು ಪರಲೋಕದ ಎಲ್ಲಾ ಒಳಿತುಗಳನ್ನು ಒಳಗೊಂಡಿರುವ ಸಮಗ್ರ ಪ್ರಾರ್ಥನೆಗಳನ್ನು ಪ್ರಾರ್ಥಿಸುವುದು ಅಪೇಕ್ಷಣೀಯವಾಗಿದೆ. ಇಷ್ಟವಾದ ಯಾವುದೇ ಪ್ರಾರ್ಥನೆಯನ್ನು ಪ್ರಾರ್ಥಿಸಬಹುದು.
  4. ಇಹಲೋಕ ಮತ್ತು ಪರಲೋಕದಲ್ಲಿ ತನಗೆ ಪ್ರಯೋಜನವಾಗುವ ವಿಷಯಗಳನ್ನು ಕಲಿಯಲು ದಾಸನು ಉತ್ಸಾಹ ತೋರಬೇಕು.
  5. ಕ್ಷಮೆ, ಕರುಣೆ ಮತ್ತು ಉಪಜೀವನವನ್ನು ಬೇಡಲು ಪ್ರೋತ್ಸಾಹಿಸಲಾಗಿದೆ. ಅವು ಒಳಿತುಗಳ ಸಂಗ್ರಹವಾಗಿವೆ.
  6. ತಮ್ಮ ಸಮುದಾಯಕ್ಕೆ ಪ್ರಯೋಜನಕಾರಿಯಾದ ವಿಷಯಗಳನ್ನು ಕಲಿಸಲು ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ತೋರಿಸಿದ ಸಹಾನುಭೂತಿಯನ್ನು ತಿಳಿಸಲಾಗಿದೆ.
  7. ಪೂರ್ಣ ಶುದ್ಧತೆಯನ್ನು ಪಡೆಯುವುದಕ್ಕಾಗಿ ಕರುಣೆಯನ್ನು ಕ್ಷಮೆಯ ನಂತರ ಪ್ರಸ್ತಾಪಿಸಲಾಗಿದೆ. ಕ್ಷಮೆ ಎಂದರೆ ಪಾಪಗಳನ್ನು ಮರೆಮಾಚುವುದು, ಅಳಿಸುವುದು ಮತ್ತು ನರಕದಿಂದ ರಕ್ಷಣೆ ಪಡೆಯುವುದು. ಕರುಣೆ ಎಂದರೆ ಒಳಿತುಗಳನ್ನು ಪಡೆಯುವುದು ಮತ್ತು ಸ್ವರ್ಗವನ್ನು ಪ್ರವೇಶಿಸುವುದು. ಇದೇ ಅತಿದೊಡ್ಡ ವಿಜಯ.
ಇನ್ನಷ್ಟು