+ -

عَنْ مَالِكِ بْنِ أَوْسِ بْنِ الْحَدَثَانِ أَنَّهُ قَالَ: أَقْبَلْتُ أَقُولُ مَنْ يَصْطَرِفُ الدَّرَاهِمَ؟ فَقَالَ طَلْحَةُ بْنُ عُبَيْدِ اللهِ وَهُوَ عِنْدَ عُمَرَ بْنِ الْخَطَّابِ رضي الله عنهما: أَرِنَا ذَهَبَكَ، ثُمَّ ائْتِنَا، إِذَا جَاءَ خَادِمُنَا، نُعْطِكَ وَرِقَكَ، فَقَالَ عُمَرُ بْنُ الْخَطَّابِ: كَلَّا، وَاللهِ لَتُعْطِيَنَّهُ وَرِقَهُ، أَوْ لَتَرُدَّنَّ إِلَيْهِ ذَهَبَهُ، فَإِنَّ رَسُولَ اللهِ صَلَّى اللهُ عَلَيْهِ وَسَلَّمَ قَالَ:
«الْوَرِقُ بِالذَّهَبِ رِبًا، إِلَّا هَاءَ وَهَاءَ، وَالْبُرُّ بِالْبُرِّ رِبًا، إِلَّا هَاءَ وَهَاءَ، وَالشَّعِيرُ بِالشَّعِيرِ رِبًا، إِلَّا هَاءَ وَهَاءَ، وَالتَّمْرُ بِالتَّمْرِ رِبًا، إِلَّا هَاءَ وَهَاءَ».

[صحيح] - [متفق عليه] - [صحيح مسلم: 1586]
المزيــد ...

ಮಾಲಿಕ್ ಬಿನ್ ಔಸ್ ಬಿನ್ ಹದಸಾನ್ ರಿಂದ ವರದಿ. ಅವರು ಹೇಳಿದರು: "ಯಾರು ಚಿನ್ನದ ನಾಣ್ಯಗಳನ್ನು ವಿನಿಮಯ ಮಾಡುತ್ತೀರಿ?" ಎಂದು ಕೇಳುತ್ತಾ ನಾನು ಬಂದೆ. ಆಗ ಉಮರ್ ಬಿನ್ ಖತ್ತಾಬ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರವರ ಬಳಿಯಿದ್ದ ತಲ್ಹ ಬಿನ್ ಉಬೈದುಲ್ಲಾ ಹೇಳಿದರು: "ನಮಗೆ ನಿನ್ನ ಚಿನ್ನದ ನಾಣ್ಯಗಳನ್ನು ತೋರಿಸು. ನಂತರ ನಮ್ಮ ಸೇವಕನು ಬಂದಾಗ ನಮ್ಮ ಬಳಿಗೆ ಬಾ. ನಾವು ನಿನಗೆ ಬೆಳ್ಳಿಯ ನಾಣ್ಯಗಳನ್ನು ನೀಡುತ್ತೇವೆ." ಆಗ ಉಮರ್ ಬಿನ್ ಖತ್ತಾಬ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ಹೇಳಿದರು: "ಖಂಡಿತ ಇಲ್ಲ. ಅಲ್ಲಾಹನಾಣೆ! ನೀನು ಒಂದೋ ಅವನಿಗೆ ಅವನ ಬೆಳ್ಳಿ ನಾಣ್ಯಗಳನ್ನು (ಈಗಲೇ) ಕೊಡಬೇಕು. ಅಥವಾ ಅವನ ಚಿನ್ನದ ನಾಣ್ಯಗಳನ್ನು ಹಿಂದಿರುಗಿಸಬೇಕು. ಏಕೆಂದರೆ ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು:
"ಚಿನ್ನದ ಬದಲಿಗೆ ಬೆಳ್ಳಿ ನೀಡುವುದು ಬಡ್ಡಿಯಾಗಿದೆ. ಸ್ಥಳದಲ್ಲೇ ವಿನಿಮಯ ಮಾಡುವುದರ ಹೊರತು. ಗೋಧಿಯ ಬದಲಿಗೆ ಗೋಧಿ ನೀಡುವುದು ಬಡ್ಡಿಯಾಗಿದೆ. ಸ್ಥಳದಲ್ಲೇ ವಿನಿಮಯ ಮಾಡುವುದರ ಹೊರತು. ಬಾರ್ಲಿಯ ಬದಲಿಗೆ ಬಾರ್ಲಿ ನೀಡುವುದು ಬಡ್ಡಿಯಾಗಿದೆ. ಸ್ಥಳದಲ್ಲೇ ವಿನಿಮಯ ಮಾಡುವುದರ ಹೊರತು. ಖರ್ಜೂರದ ಬದಲಿಗೆ ಖರ್ಜೂರ ನೀಡುವುದು ಬಡ್ಡಿಯಾಗಿದೆ. ಸ್ಥಳದಲ್ಲೇ ವಿನಿಮಯ ಮಾಡುವುದರ ಹೊರತು."

[صحيح] - [متفق عليه] - [صحيح مسلم - 1586]

ವಿವರಣೆ

ತಾಬೀಈವರ್ಯರಾದ ಮಾಲಿಕ್ ಬಿನ್ ಔಸ್ ಹೇಳುವುದೇನೆಂದರೆ, ಅವರಲ್ಲಿ ಕೆಲವು ಚಿನ್ನದ ನಾಣ್ಯಗಳಿದ್ದವು. ಅವರು ಅದನ್ನು ಬೆಳ್ಳಿಯ ನಾಣ್ಯಗಳೊಂದಿಗೆ ವಿನಿಮಯ ಮಾಡಲು ಬಯಸಿದ್ದರು. ಆಗ ತಲ್ಹ ಬಿನ್ ಉಬೈದುಲ್ಲಾ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ಹೇಳಿದರು: "ನಿನ್ನ ಚಿನ್ನದ ನಾಣ್ಯಗಳನ್ನು ನಮಗೆ ತೋರಿಸು." ನಂತರ ಅದನ್ನು ಖರೀದಿಸಲು ದಿಟ್ಟ ನಿರ್ಧಾರ ತೆಗೆದುಕೊಂಡ ಬಳಿಕ ಅವರು ಹೇಳಿದರು: "ನಮ್ಮ ಸೇವಕನು ಬಂದಾಗ ನಮ್ಮ ಬಳಿಗೆ ಬಾ. ಆಗ ನಾವು ನಿನಗೆ ಅದಕ್ಕೆ ಬದಲಾಗಿ ಬೆಳ್ಳಿಯ ನಾಣ್ಯಗಳನ್ನು ನೀಡುತ್ತೇವೆ." ಉಮರ್ ಬಿನ್ ಖತ್ತಾಬ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ಅಲ್ಲಿ ಅವರ ಬಳಿ ಉಪಸ್ಥಿತರಿದ್ದರು. ಅವರು ಈ ರೀತಿಯ ವ್ಯವಹಾರವನ್ನು ಖಂಡಿಸಿ, ಆಣೆ ಮಾಡುತ್ತಾ ತಲ್ಹರಿಗೆ, ನೀನು ಒಂದೋ ಅವನಿಗೆ ಈಗಲೇ ಬೆಳ್ಳಿಯ ನಾಣ್ಯಗಳನ್ನು ನೀಡಬೇಕು ಅಥವಾ ಅವನ ಚಿನ್ನದ ನಾಣ್ಯಗಳನ್ನು ಹಿಂದಿರುಗಿಸಬೇಕು ಎಂದು ಹೇಳಿದರು. ನಂತರ ಅದನ್ನು ವಿವರಿಸುತ್ತಾ, ಬೆಳ್ಳಿಯನ್ನು ಚಿನ್ನಕ್ಕೆ ಮತ್ತು ಚಿನ್ನವನ್ನು ಬೆಳ್ಳಿಗೆ ಖರೀದಿಸುವುದು ನೇರವಾಗಿ ಕೊಡು-ಕೊಳ್ಳುವ ರೀತಿಯಲ್ಲಿರುವುದು ಕಡ್ಡಾಯವಾಗಿದೆ, ಹಾಗಾಗದಿದ್ದರೆ ಅದು ನಿಷಿದ್ಧ ಬಡ್ಡಿಯಾಗುತ್ತದೆ ಮತ್ತು ಆ ವ್ಯವಹಾರವು ಅಸಿಂಧವಾಗುತ್ತದೆ ಎಂದು ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ತಿಳಿಸಿದ್ದಾರೆಂದು ಹೇಳಿದರು. ಆದ್ದರಿಂದ ಚಿನ್ನವನ್ನು ಬೆಳ್ಳಿಗಾಗಿ ಮತ್ತು ಬೆಳ್ಳಿಯನ್ನು ಚಿನ್ನಕ್ಕಾಗಿ ಕೈಯಿಂದ ಕೈಗೆ ನೇರವಾಗಿ ಹಸ್ತಾಂತರಿಸುವ ಮೂಲಕವಲ್ಲದೆ ಖರೀದಿಸಬಾರದು. ಜವೆಯನ್ನು ಜವೆಗಾಗಿ, ಗೋಧಿಯನ್ನು ಗೋಧಿಗಾಗಿ, ಬಾರ್ಲಿಯನ್ನು ಬಾರ್ಲಿಗಾಗಿ, ಖರ್ಜೂರವನ್ನು ಖರ್ಜೂರಕ್ಕಾಗಿ ಸಮಾನ ಗುಣಮಟ್ಟದಲ್ಲಿ, ಸಮಾನ ತೂಕದಲ್ಲಿ, ಸಮಾನ ಅಳತೆಯಲ್ಲಿ ಕೈಯಿಂದ ಕೈಗೆ ನೇರವಾಗಿ ಹಸ್ತಾಂತರಿಸುವ ಮೂಲಕವಲ್ಲದೆ ಮಾರಾಟ ಮಾಡಬಾರದು. ಈಗ ಕೊಟ್ಟು ಮತ್ತೆ ಪಡೆದುಕೊಳ್ಳುವ ರೀತಿಯಲ್ಲಿ ಮಾರಾಟ ಮಾಡಬಾರದು. ಎರಡೂ ಕಡೆಯವರು ತಮ್ಮ ತಮ್ಮ ವಸ್ತುಗಳನ್ನು ಪಡೆಯುವುದಕ್ಕೆ ಮುನ್ನ ಬೇರ್ಪಡಬಾರದು.

ಹದೀಸಿನ ಪ್ರಯೋಜನಗಳು

  1. ಈ ಹದೀಸಿನಲ್ಲಿ ಐದು ವಿಧಗಳನ್ನು ಉಲ್ಲೇಖಿಸಲಾಗಿದೆ: ಚಿನ್ನ, ಬೆಳ್ಳಿ, ಜವೆ, ಬಾರ್ಲಿ ಮತ್ತು ಖರ್ಜೂರ. ಒಂದೇ ವಿಧದಲ್ಲಿ ಸೇರಿದ ವಸ್ತುಗಳನ್ನು ವಿನಿಮಯ ಮಾಡುವುದಾದರೆ, ಅದು ಸಿಂಧುವಾಗಲು ಎರಡು ಷರತ್ತುಗಳಿವೆ: ಒಂದು: ವ್ಯವಹಾರ ನಡೆದ ಸ್ಥಳದಲ್ಲೇ ಇಬ್ಬರೂ ತಮ್ಮ ವಸ್ತುಗಳನ್ನು ಪಡೆಯುವುದು. ಎರಡು: ವಿನಿಮಯ ಮಾಡಿದ ವಸ್ತುಗಳು ಸಮಾನ ತೂಕದಲ್ಲಿರುವುದು. ಇಲ್ಲದಿದ್ದರೆ ಅದು ರಿಬಾ ಫದ್ಲ್ (ನಿವ್ವಳ ಬಡ್ಡಿ) ಆಗುತ್ತದೆ. ವಸ್ತುಗಳು ಬೇರೆ ಬೇರೆಯಾಗಿದ್ದರೆ, ಉದಾ: ಬೆಳ್ಳಿಗೆ ಗೋಧಿಯನ್ನು ಬದಲಾಯಿಸುವುದಾದರೆ ಈ ವ್ಯವಹಾರ ಸಿಂಧುವಾಗಲು ವ್ಯವಹಾರ ನಡೆದ ಸ್ಥಳದಲ್ಲಿ ಅದನ್ನು ಪಡೆಯಬೇಕು ಎಂಬ ಒಂದೇ ಒಂದು ಷರತ್ತು ಇದೆ. ಇಲ್ಲದಿದ್ದರೆ ಅದು ರಿಬಾ ನಸೀಅ (ವಿಳಂಬ ಬಡ್ಡಿ) ಆಗುತ್ತದೆ.
  2. ವ್ಯವಹಾರದ ಸ್ಥಳ ಎಂದರೆ ವಿನಿಮಯ ನಡೆಯುವ ಸ್ಥಳ. ಅದು ಕುಳಿತುಕೊಂಡಿರುವಾಗ, ನಡೆಯುತ್ತಿರುವಾಗ ಅಥವಾ ಸವಾರಿ ಮಾಡುತ್ತಿರುವಾಗ ಆಗಬಹುದು. ಬೇರ್ಪಡುವುದು ಎಂದರೆ ಸಾಮಾನ್ಯ ರೂಢಿಯಂತೆ ವ್ಯವಹಾರ ನಡೆದ ಬಳಿಕ ಬೇರ್ಪಡುವ ರೀತಿಯಾಗಿದೆ.
  3. ಹದೀಸಿನಲ್ಲಿ ಉಲ್ಲೇಖಿಸಲಾದ ಚಿನ್ನವು ಎಲ್ಲಾ ರೀತಿಯ ಚಿನ್ನವನ್ನೂ ಅದು ನಾಣ್ಯದ ರೂಪದಲ್ಲಿದ್ದರೂ ಇಲ್ಲದಿದ್ದರೂ ಒಳಗೊಳ್ಳುತ್ತದೆ. ಹಾಗೆಯೇ ಬೆಳ್ಳಿಯು ಎಲ್ಲಾ ರೀತಿಯ ಬೆಳ್ಳಿಯನ್ನೂ ಅದು ನಾಣ್ಯದ ರೂಪದಲ್ಲಿದ್ದರೂ ಇಲ್ಲದಿದ್ದರೂ ಒಳಗೊಳ್ಳುತ್ತದೆ.
  4. ಆಧುನಿಕ ಕಾಲದ ಕರೆನ್ಸಿ ನೋಟುಗಳ ಬಗ್ಗೆ ಹೇಳುವುದಾದರೆ, ಚಿನ್ನ ಮತ್ತು ಬೆಳ್ಳಿಯ ವಿನಿಮಯಕ್ಕೆ ಕಡ್ಡಾಯವಾಗಿರುವುದೆಲ್ಲವೂ ಇವುಗಳಿಗೂ ಕಡ್ಡಾಯವಾಗಿದೆ. ಅಂದರೆ, ಒಂದು ಕರೆನ್ಸಿಯನ್ನು ಇನ್ನೊಂದು ಕರೆನ್ಸಿಗೆ, ಉದಾ: ರಿಯಾಲನ್ನು ದಿರ್ಹಂಗೆ ವಿನಿಮಯ ಮಾಡುವಾಗ, ಎರಡೂ ಕಡೆಯವರು ಒಪ್ಪಿಕೊಂಡರೆ ಹೆಚ್ಚು ಕಡಿಮೆ ಪಡೆಯುವುದಕ್ಕೆ ಅನುಮತಿಯಿದೆ. ಆದರೆ ಕೊಡುವುದು ಮತ್ತು ಪಡೆಯುವುದು ವಿನಿಮಯ ನಡೆಯುವ ಸ್ಥಳದಲ್ಲಾಗಿರಬೇಕು. ಇಲ್ಲದಿದ್ದರೆ ಆ ವ್ಯವಹಾರವು ಅಸಿಂಧುವಾಗುತ್ತದೆ ಮತ್ತು ಅದು ನಿಷೇಧಿತ ಬಡ್ಡಿಗೆ ಸೇರುತ್ತದೆ.
  5. ಬಡ್ಡಿ ವ್ಯವಹಾರವು ನಿಷಿದ್ಧವಾಗಿದೆ. ಎರಡೂ ಕಡೆಯವರು ಒಪ್ಪಿಕೊಂಡರೂ ಬಡ್ಡಿಯ ಆಧಾರದಲ್ಲಿ ನಡೆಯುವ ವ್ಯವಹಾರವು ಅಸಿಂಧುವಾಗಿದೆ. ಏಕೆಂದರೆ, ಇಸ್ಲಾಂ ಧರ್ಮವು ವ್ಯಕ್ತಿ ಮತ್ತು ಸಮಾಜದ ಹಕ್ಕುಗಳನ್ನು ಸಂರಕ್ಷಿಸುತ್ತದೆ. ಅವರು ಆ ಹಕ್ಕುಗಳು ಬೇಡವೆಂದರೂ ಸಹ.
  6. ಸಾಧ್ಯವಿರುವವರು ಕೆಡುಕನ್ನು ನಿಷೇಧಿಸಬೇಕು ಮತ್ತು ತಡೆಯಬೇಕು.
  7. ಉಮರ್ ಬಿನ್ ಖತ್ತಾಬ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ಮಾಡಿದಂತೆ ಕೆಡುಕನ್ನು ತಡೆಯುವುವಾಗ ಪುರಾವೆಯನ್ನು ಪ್ರಸ್ತಾಪಿಸಬೇಕು.
ಅನುವಾದ: ಆಂಗ್ಲ ಉರ್ದು ಸ್ಪ್ಯಾನಿಷ್ ಇಂಡೋನೇಷಿಯನ್ ಉಯ್ಘರ್ ಬಂಗಾಳಿ ಫ್ರೆಂಚ್ ತುರ್ಕಿ ರಷ್ಯನ್ ಬೊಸ್ನಿಯನ್ ಸಿಂಹಳೀಯ ಹಿಂದಿ ಚೀನೀ ಪರ್ಷಿಯನ್ ವಿಯೆಟ್ನಾಮೀಸ್ ಟ್ಯಾಗಲಾಗ್ ಕುರ್ದಿಷ್ ಹೌಸಾ ಪೋರ್ಚುಗೀಸ್ ಮಲಯಾಳಂ ತೆಲುಗು ಸ್ವಾಹಿಲಿ ಥಾಯ್ ಜರ್ಮನ್ ಪಶ್ತೋ الأسامية السويدية الهولندية الغوجاراتية القيرقيزية النيبالية الرومانية المجرية الموري الأورومو الجورجية
ಅನುವಾದಗಳನ್ನು ತೋರಿಸಿ
ಇನ್ನಷ್ಟು