ಅಬೂ ಬಕರ್ ಸಿದ್ದೀಖ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ: ಅವರು ಹೇಳಿದರು: "ನಾವು ಗುಹೆಯಲ್ಲಿದ್ದಾಗ (ಹಿಜ್ರದ ಸಂದರ್ಭದಲ್ಲಿ), ಬಹುದೇವಾರಾಧಕರ ಪಾದಗಳು ನಮ್ಮ ತಲೆಗಳ ಮೇಲ್ಭಾಗದಲ್ಲಿರುವುದನ್ನು ನಾನು ನೋಡಿದೆನು. ನಾನು ಹೇಳಿದೆನು: "ಓ ಅಲ್ಲಾಹನ ಸಂದೇಶವಾಹಕರೇ, ಅವರಲ್ಲೊಬ್ಬನು ತನ್ನ ಪಾದಗಳ ಕಡೆಗೆ ನೋಡಿದರೆ, ಅವನು ನಮ್ಮನ್ನು ತನ್ನ ಪಾದಗಳ ಕೆಳಭಾಗದಲ್ಲಿ ಕಾಣುವನು". ಆಗ ಅವರು (ಪ್ರವಾದಿ) ಹೇಳಿದರು: "ಓ ಅಬೂ ಬಕರ್, ಅಲ್ಲಾಹು ಅವರ ಮೂರನೆಯವನಾಗಿರುವ ಇಬ್ಬರ ಬಗ್ಗೆ ನಿನ್ನ ಭಾವನೆ ಏನು?" [صحيح] - [متفق عليه] - [صحيح مسلم - 2381]
ವಿವರಣೆ
ಸತ್ಯವಿಶ್ವಾಸಿಗಳ ಸರದಾರರಾದ ಅಬೂ ಬಕರ್ ಸಿದ್ದೀಖ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರವರು ಹಿಜ್ರದ ಸಮಯದಲ್ಲಿ ಹೇಳಿದರು: ಬಹುದೇವಾರಾಧಕರು ನಮ್ಮ ಮೇಲ್ಭಾಗದಲ್ಲಿ, 'ಸೌರ್' ಗುಹೆಯ ಮೇಲೆ ನಿಂತಿದ್ದರು, ಮತ್ತು ನಾವು ಗುಹೆಯ ಒಳಗಿದ್ದೆವು. ಆಗ ನಾನು ಅವರ ಪಾದಗಳನ್ನು ನೋಡಿದೆನು. ನಾನು ಹೇಳಿದೆನು: ಓ ಅಲ್ಲಾಹನ ಸಂದೇಶವಾಹಕರೇ, ಅವರಲ್ಲೊಬ್ಬನು ತನ್ನ ಪಾದಗಳ ಕಡೆಗೆ ನೋಡಿದರೆ, ಅವನು ನಮ್ಮನ್ನು ತನ್ನ ಪಾದಗಳ ಕೆಳಭಾಗದಲ್ಲಿ ಕಾಣುವನು. ಆಗ ಅವರು (ಪ್ರವಾದಿ) ಹೇಳಿದರು: ಓ ಅಬೂ ಬಕರ್, ವಿಜಯ, ಸಹಾಯ, ರಕ್ಷಣೆ ಮತ್ತು ಸರಿಯಾದ ಮಾರ್ಗದರ್ಶನದೊಂದಿಗೆ ಅಲ್ಲಾಹು ಮೂರನೆಯವನಾಗಿರುವ ಇಬ್ಬರ ಬಗ್ಗೆ ನಿನ್ನ ಭಾವನೆಯೇನು?!
ಹದೀಸಿನ ಪ್ರಯೋಜನಗಳು
ಅಬೂ ಬಕರ್ ಸಿದ್ದೀಖ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರವರ ಶ್ರೇಷ್ಠತೆಯನ್ನು ವಿವರಿಸಲಾಗಿದೆ. ಅವರು ತಮ್ಮ ಕುಟುಂಬ ಹಾಗೂ ಸಂಪತ್ತನ್ನು ತೊರೆದು ಮಕ್ಕಾದಿಂದ ಮದೀನಾಕ್ಕೆ ಹಿಜ್ರ ಮಾಡುವಾಗ ಅಲ್ಲಾಹನ ಸಂದೇಶವಾಹಕರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಜೊತೆಗಿದ್ದರು.
ಅಬೂ ಬಕರ್ ಸಿದ್ದೀಖ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರವರ ಸಹಾನುಭೂತಿ, ಅಲ್ಲಾಹನ ಸಂದೇಶವಾಹಕರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಮೇಲೆ ಅವರಿಗಿದ್ದ ಅಪಾರ ಪ್ರೀತಿ, ಮತ್ತು ಶತ್ರುಗಳಿಂದ ಪ್ರವಾದಿಗೆ ತೊಂದರೆಯಾಗಬಹುದೆಂಬ ಅವರ ಭಯವನ್ನು ತಿಳಿಸಲಾಗಿದೆ.
ಮುನ್ನೆಚ್ಚರಿಕೆ ಹಾಗೂ ಜಾಗರೂಕತೆ ವಹಿಸಲು ಸರಿಯಾಗಿ ಪ್ರಯತ್ನಿಸಿದ ನಂತರ ಅಲ್ಲಾಹನ ಮೇಲೆ ಭರವಸೆಯಿಡುವುದು ಮತ್ತು ಅವನ ಆರೈಕೆ ಮತ್ತು ಕಾಳಜಿಯ ಬಗ್ಗೆ ನಿಶ್ಚಿಂತೆಯಿಂದಿರುವುದು ಕಡ್ಡಾಯವಾಗಿದೆ.
ಅಲ್ಲಾಹು ತನ್ನ ಪ್ರವಾದಿಗಳು ಹಾಗೂ ಇಷ್ಟದಾಸರ ಬಗ್ಗೆ ವಹಿಸುವ ಕಾಳಜಿ, ಮತ್ತು ಸಹಾಯ ಮಾಡುವ ಮೂಲಕ ಅವರಿಗೆ ನೀಡುವ ರಕ್ಷಣೆಯನ್ನು ತಿಳಿಸಲಾಗಿದೆ. ಅಲ್ಲಾಹು ಹೇಳುತ್ತಾನೆ: "ಖಂಡಿತವಾಗಿಯೂ ನಾವು ನಮ್ಮ ಸಂದೇಶವಾಹಕರಿಗೆ ಮತ್ತು ಸತ್ಯವಿಶ್ವಾಸಿಗಳಿಗೆ ಇಹಲೋಕದಲ್ಲೂ ಮತ್ತು ಸಾಕ್ಷಿಗಳು ನಿಲ್ಲುವ ದಿನದಂದು (ಪುನರುತ್ಥಾನ ದಿನ) ಸಹಾಯ ಮಾಡುತ್ತೇವೆ." [ಸೂರಃ ಗಾಫಿರ್: 51]
ಯಾರು ಅಲ್ಲಾಹನ ಮೇಲೆ ಭರವಸೆಯಿಡುತ್ತಾರೋ, ಅವರಿಗೆ ಅಲ್ಲಾಹು ಸಾಕಾಗುತ್ತಾನೆ, ಅವನು ಅವರಿಗೆ ವಿಜಯವನ್ನು ನೀಡುತ್ತಾನೆ, ಸಹಾಯ ಮಾಡುತ್ತಾನೆ, ಅವರನ್ನು ಕಾಪಾಡುತ್ತಾನೆ ಮತ್ತು ರಕ್ಷಿಸುತ್ತಾನೆ ಎಂದು ಸೂಚಿಸಲಾಗಿದೆ.
ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ತಮ್ಮ ಪರಿಪಾಲಕನ (ಅಲ್ಲಾಹನ) ಮೇಲೆ ಹೊಂದಿದ್ದ ಪರಿಪೂರ್ಣ ಭರವಸೆಯನ್ನು (ತವಕ್ಕುಲ್), ಮತ್ತು ಅವರು ಅವನ ಮೇಲೆ ಸಂಪೂರ್ಣ ಅವಲಂಬಿತರಾಗಿದ್ದರು ಹಾಗೂ ತಮ್ಮ ಎಲ್ಲಾ ವ್ಯವಹಾರಗಳನ್ನು ಅವನಿಗೆ ಒಪ್ಪಿಸಿದ್ದರು ಎಂದು ತಿಳಿಸಲಾಗಿದೆ.
ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಧೈರ್ಯ, ಮತ್ತು ಹೃದಯಗಳಿಗೆ ಹಾಗೂ ಆತ್ಮಗಳಿಗೆ ಧೈರ್ಯ ತುಂಬುವ ಅವರ ಸಾಮರ್ಥ್ಯವನ್ನು ತಿಳಿಸಲಾಗಿದೆ.
ಶತ್ರುಗಳ ಭಯದಿಂದ ಧರ್ಮದೊಂದಿಗೆ ಪಲಾಯನ ಮಾಡುವುದನ್ನು, ಮತ್ತು (ಅದಕ್ಕಾಗಿ ಲಭ್ಯವಿರುವ) ಮಾರ್ಗಗಳನ್ನು ಬಳಸುವುದನ್ನು ವಿವರಿಸಲಾಗಿದೆ.