عَنْ عُمَرَ بْنِ الخَطَّابِ رَضِيَ اللَّهُ عَنْهُ:
أَنَّ رَجُلًا مِنَ اليَهُودِ قَالَ لَهُ: يَا أَمِيرَ المُؤْمِنِينَ، آيَةٌ فِي كِتَابِكُمْ تَقْرَؤُونَهَا، لَوْ عَلَيْنَا مَعْشَرَ اليَهُودِ نَزَلَتْ لاَتَّخَذْنَا ذَلِكَ اليَوْمَ عِيدًا، قَالَ: أَيُّ آيَةٍ؟ قَالَ: {اليَوْمَ أَكْمَلْتُ لَكُمْ دِينَكُمْ وَأَتْمَمْتُ عَلَيْكُمْ نِعْمَتِي وَرَضِيتُ لَكُمُ الإِسْلاَمَ دِينًا} [المائدة: 3] قَالَ عُمَرُ: قَدْ عَرَفْنَا ذَلِكَ اليَوْمَ، وَالمَكَانَ الَّذِي نَزَلَتْ فِيهِ عَلَى النَّبِيِّ صَلَّى اللهُ عَلَيْهِ وَسَلَّمَ، وَهُوَ قَائِمٌ بِعَرَفَةَ يَوْمَ جُمُعَةٍ.

[صحيح] - [متفق عليه] - [صحيح البخاري: 45]
المزيــد ...

ಉಮರ್ ಇಬ್ನುಲ್-ಖತ್ತಾಬ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ:
ಯಹೂದಿಗಳ ಪೈಕಿ ಒಬ್ಬ ವ್ಯಕ್ತಿ ಅವರಿಗೆ (ಉಮರ್ ರಿಗೆ) ಹೇಳಿದರು: "ಓ ಅಮೀರುಲ್ ಮೂಮಿನೀನ್ (ವಿಶ್ವಾಸಿಗಳ ನಾಯಕರೇ), ನಿಮ್ಮ ಗ್ರಂಥದಲ್ಲಿ (ಕುರ್‌ಆನ್‌ನಲ್ಲಿ) ಒಂದು ವಚನವಿದೆ, ಅದನ್ನು ನೀವು ಪಠಿಸುತ್ತೀರಿ. ಒಂದು ವೇಳೆ ಅದು ನಮ್ಮ ಮೇಲೆ — ಅಂದರೆ ಯಹೂದಿಗಳ ಸಮುದಾಯದ ಮೇಲೆ — ಅವತೀರ್ಣವಾಗಿದ್ದರೆ, ನಾವು ಆ ದಿನವನ್ನು ಹಬ್ಬವನ್ನಾಗಿ ಆಚರಿಸುತ್ತಿದ್ದೆವು." ಅವರು (ಉಮರ್) ಕೇಳಿದರು: "ಯಾವ ವಚನ?" ಅವರು ಹೇಳಿದರು: "ಇಂದು ನಾನು ನಿಮಗೆ ನಿಮ್ಮ ಧರ್ಮವನ್ನು ಪರಿಪೂರ್ಣಗೊಳಿಸಿದ್ದೇನೆ, ನಿಮ್ಮ ಮೇಲೆ ನನ್ನ ಅನುಗ್ರಹವನ್ನು ಪೂರ್ತಿಗೊಳಿಸಿದ್ದೇನೆ ಮತ್ತು ಇಸ್ಲಾಂ ಅನ್ನು ನಿಮಗೆ ಧರ್ಮವನ್ನಾಗಿ ಮೆಚ್ಚಿಕೊಂಡಿದ್ದೇನೆ" [ಅಲ್-ಮಾಯಿದಃ: 3]. ಆಗ ಉಮರ್ ಹೇಳಿದರು: "ಆ ದಿನ ಮತ್ತು ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಮೇಲೆ ಆ ವಚನ ಇಳಿದ ಜಾಗ ನಮಗೆ ತಿಳಿದಿದೆ; ಅವರು ಅರಫಾದಲ್ಲಿ ನಿಂತಿದ್ದರು ಮತ್ತು ಅದು ಶುಕ್ರವಾರವಾಗಿತ್ತು."

[صحيح] - [متفق عليه] - [صحيح البخاري - 45]

ವಿವರಣೆ

ಯಹೂದಿಗಳ ಪೈಕಿ ಒಬ್ಬ ವ್ಯಕ್ತಿ ಅಮೀರುಲ್ ಮೂಮಿನೀನ್ ಉಮರ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರವರ ಬಳಿ ಬಂದು ಹೇಳಿದರು: "ನಿಮ್ಮ ಗ್ರಂಥವಾದ ಕುರ್‌ಆನ್‌ನಲ್ಲಿ ಒಂದು ವಚನವಿದೆ, ಅದನ್ನು ನೀವು ಪಠಿಸುತ್ತೀರಿ. ಒಂದು ವೇಳೆ ಅದು ನಮ್ಮ ಮೇಲೆ — ಅಂದರೆ ಯಹೂದಿಗಳ ಸಮುದಾಯದ ಮೇಲೆ — ನಮ್ಮ ಗ್ರಂಥವಾದ ತೌರಾತ್‌ನಲ್ಲಿ ಅವತೀರ್ಣವಾಗಿದ್ದರೆ, ನಾವು ಆ ದಿನವನ್ನು ಹಬ್ಬವನ್ನಾಗಿ ಆಚರಿಸುತ್ತಿದ್ದೆವು; ಈ ಮಹಾನ್ ವಚನ ಅವತೀರ್ಣವಾದ ಅನುಗ್ರಹಕ್ಕಾಗಿ ಕೃತಜ್ಞತೆ ಸಲ್ಲಿಸಲು (ಹೀಗೆ ಮಾಡುತ್ತಿದ್ದೆವು)." ಆಗ ಉಮರ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) "ಯಾವ ವಚನ?" ಎಂದು ಕೇಳಿದರು. ಅವರು ಹೇಳಿದರು: "ಇಂದು ನಾನು ನಿಮಗೆ ನಿಮ್ಮ ಧರ್ಮವನ್ನು ಪರಿಪೂರ್ಣಗೊಳಿಸಿದ್ದೇನೆ, ನಿಮ್ಮ ಮೇಲೆ ನನ್ನ ಅನುಗ್ರಹವನ್ನು ಪೂರ್ತಿಗೊಳಿಸಿದ್ದೇನೆ ಮತ್ತು ಇಸ್ಲಾಂ ಅನ್ನು ನಿಮಗೆ ಧರ್ಮವನ್ನಾಗಿ ಮೆಚ್ಚಿಕೊಂಡಿದ್ದೇನೆ". ಆಗ ಉಮರ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ಹೇಳಿದರು: "ನಮಗೆ ಆ ದಿನ ಮತ್ತು ಈ ಪವಿತ್ರ ವಚನ ಅವತೀರ್ಣವಾದ ಜಾಗದ ಅರಿವಿದೆ. ಇದು ಹಬ್ಬದ ದಿನದಂದೇ ಅವತೀರ್ಣವಾಗಿದೆ. ಅಂದು ಶುಕ್ರವಾರವಾಗಿತ್ತು ಮತ್ತು ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಅರಫಾದಲ್ಲಿ ನಿಂತಿದ್ದರು. ಇವೆರಡೂ ಮುಸ್ಲಿಮರ ಪಾಲಿಗೆ ಮಹಾನ್ ದಿನಗಳಾಗಿವೆ."

ಹದೀಸಿನ ಪ್ರಯೋಜನಗಳು

  1. ವಚನ ಅವತೀರ್ಣವಾದ ಸ್ಥಳ ಮತ್ತು ಸಮಯದ ಬಗ್ಗೆ ಉಮರ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರವರು ಹೊಂದಿದ್ದ ಕಾಳಜಿಯನ್ನು ಇದು ವಿವರಿಸುತ್ತದೆ.
  2. ಅಲ್ಲಾಹು ಈ ಸಮುದಾಯದ ಮೇಲೆ ಮಾಡಿದ ಉಪಕಾರವನ್ನು ಈ ವಚನ ತಿಳಿಸುತ್ತದೆ. ಅವನು ಧರ್ಮವನ್ನು ಪೂರ್ತಿಗೊಳಿಸಿದ್ದಾನೆ ಮತ್ತು ತನ್ನ ಅನುಗ್ರಹವನ್ನು ಸಂಪೂರ್ಣಗೊಳಿಸಿದ್ದಾನೆ. ಆದ್ದರಿಂದ ಧರ್ಮದ ವಿಷಯದಲ್ಲಿ ಯಾವುದೇ ಸೇರ್ಪಡೆಯ ಅಗತ್ಯವಿಲ್ಲ. ಅಲ್ಲಾಹು ಧರ್ಮವನ್ನು ಪೂರ್ತಿಗೊಳಿಸಿದ ನಂತರ, ಅದರಲ್ಲಿ ಹೊಸದಾಗಿ ಹುಟ್ಟುಹಾಕಲಾದ ಮತ್ತು ಅದಕ್ಕೆ ಯಾವುದೇ ಪುರಾವೆಯಿಲ್ಲದ ಪ್ರತಿಯೊಂದು ವಿಷಯವೂ ದುರ್ಮಾರ್ಗ ಮತ್ತು ಬಿದ್ಅತ್ (ನವೀನ ಆಚರಣೆ) ಆಗಿದೆ. ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೀಗೆ ಹೇಳಿದರೆಂದು ದೃಢಪಟ್ಟಿದೆ: "ನಮ್ಮ ಈ ವಿಷಯದಲ್ಲಿ (ಧರ್ಮದಲ್ಲಿ) ಇಲ್ಲದುದನ್ನು ಯಾರು ಹೊಸದಾಗಿ ಸೇರಿಸುತ್ತಾರೋ, ಅದು ತಿರಸ್ಕೃತಗೊಳ್ಳುತ್ತದೆ."
  3. ಹಬ್ಬಗಳು ಜನರ ಅಭಿಪ್ರಾಯ ಮತ್ತು ಹೊಸ ಆಲೋಚನೆಗಳಿಂದ ನಿರ್ಧಾರವಾಗುವುದಿಲ್ಲ — ಹಿಂದಿನ ಗ್ರಂಥದವರು (ಯಹೂದಿ ಮತ್ತು ಕ್ರೈಸ್ತರು) ಮಾಡಿದಂತೆ — ಬದಲಾಗಿ ಅವು ಶರೀಅತ್ ಮತ್ತು ಪ್ರವಾದಿಯವರ ಅನುಸರಣೆಯ ಮೂಲಕ ನಿರ್ಧಾರವಾಗುತ್ತವೆ ಎಂಬುದನ್ನು ಈ ಹದೀಸ್‌ನಿಂದ ಕಲಿಯಬಹುದು. ಧರ್ಮದ ಪೂರ್ಣತೆ ಮತ್ತು ಅನುಗ್ರಹದ ಸಂಪೂರ್ಣತೆಯನ್ನು ಒಳಗೊಂಡಿರುವ ಈ ವಚನವನ್ನು, ಅಲ್ಲಾಹು ಈ ಸಮುದಾಯಕ್ಕೆ ಹಬ್ಬವಾಗಿ ನಿಗದಿಪಡಿಸಿದ ದಿನದಂದೇ ಇಳಿಸಿದ್ದಾನೆ. ಅದು ಎರಡು ವಿಧದಲ್ಲಿದೆ: 1. ಅದು ವಾರದ ಹಬ್ಬದ ದಿನವಾಗಿತ್ತು (ಶುಕ್ರವಾರ). 2. ಅದು ಹಜ್ ಯಾತ್ರಿಕರ ಹಬ್ಬದ ದಿನವಾಗಿತ್ತು (ಅರಫಾ ದಿನ); ಇದು ಅವರ ಅತಿದೊಡ್ಡ ಸಭೆ ಮತ್ತು ಮಹಾನ್ ನಿಲ್ಲುವಿಕೆಯ ದಿನವಾಗಿದೆ.
  4. ಈ ವಚನದ ವಿವರಣೆಯಲ್ಲಿ ಅಸ್ಸಅದಿ ಹೇಳುತ್ತಾರೆ: "{ಇಂದು ನಾನು ನಿಮಗೆ ನಿಮ್ಮ ಧರ್ಮವನ್ನು ಪರಿಪೂರ್ಣಗೊಳಿಸಿದ್ದೇನೆ}" ಎಂದರೆ ಸಂಪೂರ್ಣ ವಿಜಯದ ಮೂಲಕ, ಮತ್ತು ಬಾಹ್ಯ ಹಾಗೂ ಆಂತರಿಕ, ಮೂಲಭೂತ ಮತ್ತು ಕವಲು ವಿಷಯಗಳೆಲ್ಲವನ್ನೂ ಒಳಗೊಂಡ ಶರೀಅತ್ ಅನ್ನು ಪೂರ್ತಿಗೊಳಿಸುವ ಮೂಲಕ. ಆದ್ದರಿಂದ ಧರ್ಮದ ಮೂಲ ತತ್ವಗಳು ಮತ್ತು ನಿಯಮಗಳನ್ನು ಅರಿಯಲು ಕುರ್‌ಆನ್ ಮತ್ತು ಸುನ್ನತ್ ಸಾಕು. ವಿಶ್ವಾಸ (ಅಕೀದಾ) ಮತ್ತು ನಿಯಮಗಳನ್ನು ತಿಳಿಯಲು ಕುರ್‌ಆನ್ ಮತ್ತು ಸುನ್ನತ್ ಹೊರತುಪಡಿಸಿ, ತರ್ಕಶಾಸ್ತ್ರ (ಇಲ್ಮುಲ್ ಕಲಾಂ) ಮುಂತಾದ ಬೇರೆ ಜ್ಞಾನದ ಮೊರೆ ಹೋಗಲೇಬೇಕು ಎಂದು ಯಾರು ವಾದಿಸುತ್ತಾರೋ, ಅವರು ಅಜ್ಞಾನಿಗಳಾಗಿದ್ದಾರೆ ಮತ್ತು ಅವರ ವಾದ ತಪ್ಪಾಗಿದೆ. ತಾನು ಹೇಳುವ ಮತ್ತು ಆಹ್ವಾನಿಸುವ ವಿಷಯಗಳಿಲ್ಲದೆ ಧರ್ಮ ಪೂರ್ಣವಾಗುವುದಿಲ್ಲ ಎಂದು ಅವನು ಭಾವಿಸಿದಂತಾಗುತ್ತದೆ. ಇದು ಅಲ್ಲಾಹು ಮತ್ತು ಅವನ ರಸೂಲರ ಬಗ್ಗೆ ಮಾಡಿದ ದೊಡ್ಡ ಅನ್ಯಾಯ ಮತ್ತು ಅವರನ್ನು ಅಜ್ಞಾನಿಗಳೆಂದು ಕರೆದಂತಾಗುತ್ತದೆ. "ನಿಮ್ಮ ಮೇಲೆ ನನ್ನ ಅನುಗ್ರಹವನ್ನು ಪೂರ್ತಿಗೊಳಿಸಿದ್ದೇನೆ" ಅಂದರೆ ಬಾಹ್ಯ ಮತ್ತು ಆಂತರಿಕ ಅನುಗ್ರಹಗಳನ್ನು. "ಇಸ್ಲಾಂ ಅನ್ನು ನಿಮಗೆ ಧರ್ಮವನ್ನಾಗಿ ಮೆಚ್ಚಿಕೊಂಡಿದ್ದೇನೆ" ಅಂದರೆ, ನಾನು ನಿಮಗಾಗಿ ಆರಿಸಿದ ಧರ್ಮ ಇದೇ ಆಗಿದೆ ಮತ್ತು ನಿಮಗಾಗಿ ನಾನು ತೃಪ್ತಿಪಟ್ಟ ಧರ್ಮವೂ ಇದೇ ಆಗಿದೆ. ಆದ್ದರಿಂದ ನಿಮ್ಮ ರಬ್ಬ್‌ಗೆ (ಪರಿಪಾಲಕನಿಗೆ) ಕೃತಜ್ಞತೆ ಸಲ್ಲಿಸುತ್ತಾ ಇದನ್ನು ಪಾಲಿಸಿರಿ. ಅತ್ಯುತ್ತಮ, ಶ್ರೇಷ್ಠ ಹಾಗೂ ಪರಿಪೂರ್ಣ ಧರ್ಮವನ್ನು ಅನುಗ್ರಹಿಸಿದವನಿಗೆ ಸ್ತುತಿ ಸಲ್ಲಿಸಿರಿ.
ಅನುವಾದ: ಆಂಗ್ಲ ಇಂಡೋನೇಷಿಯನ್ ಬಂಗಾಳಿ ರಷ್ಯನ್ ವಿಯೆಟ್ನಾಮೀಸ್ ಟ್ಯಾಗಲಾಗ್ ಕುರ್ದಿಷ್ ಹೌಸಾ ಪೋರ್ಚುಗೀಸ್ ಮಲಯಾಳಂ ಸ್ವಾಹಿಲಿ ಥಾಯ್ الأسامية الهولندية الغوجاراتية الدرية المجرية الجورجية المقدونية الخميرية البنجابية الماراثية
ಅನುವಾದಗಳನ್ನು ತೋರಿಸಿ
ಇನ್ನಷ್ಟು