عَنْ أَبِي سَعِيدٍ الخُدْرِيَّ رَضيَ اللهُ عنهُ قَالَ:
بَعَثَ عَلِيُّ بْنُ أَبِي طَالِبٍ رَضِيَ اللَّهُ عَنْهُ إِلَى رَسُولِ اللَّهِ صَلَّى اللهُ عَلَيْهِ وَسَلَّمَ مِنَ اليَمَنِ بِذُهَيْبَةٍ فِي أَدِيمٍ مَقْرُوظٍ، لَمْ تُحَصَّلْ مِنْ تُرَابِهَا، قَالَ: فَقَسَمَهَا بَيْنَ أَرْبَعَةِ نَفَرٍ، بَيْنَ عُيَيْنَةَ بْنِ بَدْرٍ وَأَقْرَعَ بْنِ حابِسٍ وَزَيْدِ الخَيْلِ، وَالرَّابِعُ: إِمَّا عَلْقَمَةُ وَإِمَّا عَامِرُ بْنُ الطُّفَيْلِ، فَقَالَ رَجُلٌ مِنْ أَصْحَابِهِ: كُنَّا نَحْنُ أَحَقَّ بِهَذَا مِنْ هَؤُلاَءِ، قَالَ: فَبَلَغَ ذَلِكَ النَّبِيَّ صَلَّى اللهُ عَلَيْهِ وَسَلَّمَ فَقَالَ: «أَلاَ تَأْمَنُونِي وَأَنَا أَمِينُ مَنْ فِي السَّمَاءِ، يَأْتِينِي خَبَرُ السَّمَاءِ صَبَاحًا وَمَسَاءً»، قَالَ: فَقَامَ رَجُلٌ غَائِرُ العَيْنَيْنِ، مُشْرِفُ الوَجْنَتَيْنِ، نَاشِزُ الجَبْهَةِ، كَثُّ اللِّحْيَةِ، مَحْلُوقُ الرَّأْسِ، مُشَمَّرُ الإِزَارِ، فَقَالَ يَا رَسُولَ اللَّهِ اتَّقِ اللَّهَ، قَالَ: «وَيْلَكَ، أَوَلَسْتُ أَحَقَّ أَهْلِ الأَرْضِ أَنْ يَتَّقِيَ اللَّهَ» قَالَ: ثُمَّ وَلَّى الرَّجُلُ، قَالَ خَالِدُ بْنُ الوَلِيدِ: يَا رَسُولَ اللَّهِ، أَلاَ أَضْرِبُ عُنُقَهُ؟ قَالَ: «لاَ، لَعَلَّهُ أَنْ يَكُونَ يُصَلِّي» فَقَالَ خَالِدٌ: وَكَمْ مِنْ مُصَلٍّ يَقُولُ بِلِسَانِهِ مَا لَيْسَ فِي قَلْبِهِ، قَالَ رَسُولُ اللَّهِ صَلَّى اللهُ عَلَيْهِ وَسَلَّمَ: «إِنِّي لَمْ أُومَرْ أَنْ أَنْقُبَ عَنْ قُلُوبِ النَّاسِ وَلاَ أَشُقَّ بُطُونَهُمْ» قَالَ: ثُمَّ نَظَرَ إِلَيْهِ وَهُوَ مُقَفٍّ، فَقَالَ: «إِنَّهُ يَخْرُجُ مِنْ ضِئْضِئِ هَذَا قَوْمٌ يَتْلُونَ كِتَابَ اللَّهِ رَطْبًا، لاَ يُجَاوِزُ حَنَاجِرَهُمْ، يَمْرُقُونَ مِنَ الدِّينِ كَمَا يَمْرُقُ السَّهْمُ مِنَ الرَّمِيَّةِ»، وَأَظُنُّهُ قَالَ: «لَئِنْ أَدْرَكْتُهُمْ لَأَقْتُلَنَّهُمْ قَتْلَ ثَمُودَ».

[صحيح] - [متفق عليه] - [صحيح البخاري: 4351]
المزيــد ...

ಅಬೂ ಸಈದ್ ಖುದ್ರಿ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು:
ಅಲಿ ಬಿನ್ ಅಬೂ ತಾಲಿಬ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರವರು ಯಮನ್‌ನಿಂದ ಅಲ್ಲಾಹುವಿನ ಸಂದೇಶವಾಹಕರಿಗೆ (ಅವರ ಮೇಲೆ ಅಲ್ಲಾಹುವಿನ ಕೃಪೆ ಮತ್ತು ಶಾಂತಿಯಿರಲಿ) ಒಂದು ಚಿಕ್ಕ ಚಿನ್ನದ ತುಂಡನ್ನು, ಕರಝ್ (ಒಂದು ರೀತಿಯ ಎಲೆ) ನಿಂದ ಹದಮಾಡಿದ ತೊಗಲ ಚೀಲದಲ್ಲಿ ಕಳುಹಿಸಿದರು. ಆ ಚಿನ್ನವನ್ನು ಅದರ ಮಣ್ಣಿನಿಂದ ಇನ್ನೂ ಬೇರ್ಪಡಿಸಿರಲಿಲ್ಲ. ವರದಿಗಾರರು ಹೇಳುತ್ತಾರೆ: ಪ್ರವಾದಿಯವರು (ಅವರ ಮೇಲೆ ಅಲ್ಲಾಹುವಿನ ಕೃಪೆ ಮತ್ತು ಶಾಂತಿಯಿರಲಿ) ಅದನ್ನು ನಾಲ್ಕು ಜನರ ನಡುವೆ ಹಂಚಿದರು: ಉಯೈನಾ ಬಿನ್ ಬದ್ರ್, ಅಖ್ರಅ್ ಬಿನ್ ಹಾಬಿಸ್, ಝೈದ್ ಅಲ್-ಖೈಲ್, ಮತ್ತು ನಾಲ್ಕನೆಯವರು ಅಲ್ಕಮಾ ಅಥವಾ ಆಮಿರ್ ಬಿನ್ ತುಫೈಲ್ ಆಗಿರಬಹುದು. ಆಗ ಅವರ ಸಹಾಬಿಗಳಲ್ಲಿ ಒಬ್ಬ ವ್ಯಕ್ತಿ ಹೇಳಿದರು: "ಇವರಿಗಿಂತ ನಾವೇ ಇದಕ್ಕೆ ಹೆಚ್ಚು ಅರ್ಹರಾಗಿದ್ದೆವು". ವರದಿಗಾರರು ಹೇಳುತ್ತಾರೆ: ಈ ವಿಷಯವು ಪ್ರವಾದಿಯವರಿಗೆ (ಅವರ ಮೇಲೆ ಅಲ್ಲಾಹುವಿನ ಕೃಪೆ ಮತ್ತು ಶಾಂತಿಯಿರಲಿ) ತಲುಪಿದಾಗ ಅವರು ಹೇಳಿದರು: "ನೀವು ನನ್ನನ್ನು ನಂಬುವುದಿಲ್ಲವೇ? ನಾನು ಆಕಾಶದಲ್ಲಿರುವವನ (ಅಲ್ಲಾಹುವಿನ) ನಂಬಿಗಸ್ಥ ದಾಸನಾಗಿದ್ದೇನೆ. ನನಗೆ ಆಕಾಶದ ಸುದ್ದಿ (ದಿವ್ಯಸಂದೇಶ) ಬೆಳಿಗ್ಗೆ ಮತ್ತು ಸಂಜೆ ಬರುತ್ತದೆ". ವರದಿಗಾರರು ಹೇಳುತ್ತಾರೆ: ಆಗ ಒಬ್ಬ ವ್ಯಕ್ತಿ ಎದ್ದು ನಿಂತನು - ಅವನ ಕಣ್ಣುಗಳು ಕುಳಿಬಿದ್ದಿದ್ದವು, ಕೆನ್ನೆಗಳು ಎತ್ತರವಾಗಿದ್ದವು, ಹಣೆ ಉಬ್ಬಿತ್ತು, ಗಡ್ಡ ದಟ್ಟವಾಗಿತ್ತು, ತಲೆ ಬೋಳಿಸಲಾಗಿತ್ತು, ಮತ್ತು ಪಂಚೆಯನ್ನು ಮೇಲೆತ್ತಿ ಕಟ್ಟಲಾಗಿತ್ತು. ಅವನು ಹೇಳಿದನು: "ಓ ಅಲ್ಲಾಹುವಿನ ಸಂದೇಶವಾಹಕರೇ, ಅಲ್ಲಾಹುವನ್ನು ಭಯಪಡಿರಿ (ತಖ್ವಾ ಪಾಲಿಸಿರಿ)!". ಪ್ರವಾದಿಯವರು (ಅವರ ಮೇಲೆ ಅಲ್ಲಾಹುವಿನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ನಿನಗೆ ವಿನಾಶವಾಗಲಿ! ಭೂಮಿಯ ಜನರಲ್ಲಿ ಅಲ್ಲಾಹುವನ್ನು ಭಯಪಡಲು ಅತ್ಯಂತ ಅರ್ಹನಾದವನು ನಾನಲ್ಲವೇ?!". ವರದಿಗಾರರು ಹೇಳುತ್ತಾರೆ: ನಂತರ ಆ ವ್ಯಕ್ತಿ ಹೊರಟುಹೋದನು. ಖಾಲಿದ್ ಬಿನ್ ವಲೀದ್ ಹೇಳಿದರು: "ಓ ಅಲ್ಲಾಹುವಿನ ಸಂದೇಶವಾಹಕರೇ, ನಾನು ಅವನ ಕುತ್ತಿಗೆಯನ್ನು ಕತ್ತರಿಸಿಬಿಡಲೇ?". ಪ್ರವಾದಿಯವರು (ಅವರ ಮೇಲೆ ಅಲ್ಲಾಹುವಿನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಬೇಡ, ಬಹುಶಃ ಆತ ನಮಾಝ್ ಮಾಡುವವನಾಗಿರಬಹುದು". ಆಗ ಖಾಲಿದ್ ಹೇಳಿದರು: "ಎಷ್ಟೋ ನಮಾಝ್ ಮಾಡುವವರಿದ್ದಾರೆ. ಅವರು ತಮ್ಮ ಹೃದಯದಲ್ಲಿ ಇಲ್ಲದ್ದನ್ನು ತಮ್ಮ ನಾಲಿಗೆಯಿಂದ ಹೇಳುತ್ತಾರೆ!" ಅಲ್ಲಾಹುವಿನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹುವಿನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ನಾನು ಜನರ ಹೃದಯಗಳನ್ನು ಶೋಧಿಸಲು ಅಥವಾ ಅವರ ಹೊಟ್ಟೆಗಳನ್ನು ಸೀಳಲು ಆಜ್ಞಾಪಿಸಲ್ಪಟ್ಟವನಲ್ಲ". ವರದಿಗಾರರು ಹೇಳುತ್ತಾರೆ: ನಂತರ ಅವನು (ಆ ವ್ಯಕ್ತಿ) ಹಿಂತಿರುಗಿ ಹೋಗುತ್ತಿದ್ದಾಗ ಪ್ರವಾದಿಯವರು (ಅವರ ಮೇಲೆ ಅಲ್ಲಾಹುವಿನ ಕೃಪೆ ಮತ್ತು ಶಾಂತಿಯಿರಲಿ) ಅವನ ಕಡೆಗೆ ನೋಡಿ ಹೇಳಿದರು: "ಖಂಡಿತವಾಗಿಯೂ ಈತನ ಸಂತತಿಯಿಂದ ಒಂದು ಗುಂಪು ಉದ್ಭವವಾಗುತ್ತದೆ. ಅವರು ಅಲ್ಲಾಹುವಿನ ಗ್ರಂಥವನ್ನು ತಾಜಾತನದಿಂದ ಪಠಿಸುತ್ತಾರೆ, ಆದರೆ ಅದು ಅವರ ಗಂಟಲುಗಳನ್ನು ದಾಟುವುದಿಲ್ಲ (ಅವರ ಹೃದಯಗಳನ್ನು ತಲುಪುವುದಿಲ್ಲ). ಹೇಗೆ ಬಾಣವು ಲಕ್ಷ್ಯದಿಂದ (ಹೊರ)ಬೀಳುತ್ತದೆಯೋ ಹಾಗೆಯೇ ಅವರು ಧರ್ಮದಿಂದ ಹೊರಹೋಗುತ್ತಾರೆ." ವರದಿಗಾರರು ಹೇಳುತ್ತಾರೆ: ಮತ್ತು ಅವರು (ಪ್ರವಾದಿಯವರು) ಹೀಗೆ ಹೇಳಿದರು ಎಂದು ನಾನು ಭಾವಿಸುತ್ತೇನೆ: "ಒಂದು ವೇಳೆ ನಾನು ಅವರನ್ನು (ಅವರ ಕಾಲವನ್ನು) ತಲುಪಿದರೆ, ಖಂಡಿತವಾಗಿಯೂ ನಾನು ಅವರನ್ನು 'ಸಮೂದ್' ಜನಾಂಗವನ್ನು ಕೊಂದಂತೆ ಕೊಲ್ಲುತ್ತೇನೆ."

[صحيح] - [متفق عليه] - [صحيح البخاري - 4351]

ವಿವರಣೆ

ಅಲಿ ಬಿನ್ ಅಬೂ ತಾಲಿಬ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ಅವರು ಯಮನ್‌ನಿಂದ ಅಲ್ಲಾಹನ ಸಂದೇಶವಾಹಕರಿಗೆ (ಅವರ ಮೇಲೆ ಅಲ್ಲಾಹುವಿನ ಕೃಪೆ ಮತ್ತು ಶಾಂತಿಯಿರಲಿ) ಒಂದು ಚಿನ್ನದ ತುಂಡನ್ನು, ಕರಝ್‌ನಿಂದ ಹದಮಾಡಿದ ತೊಗಲ ಚೀಲದಲ್ಲಿ ಕಳುಹಿಸಿದರು. ಆ ಚಿನ್ನದ ತುಂಡನ್ನು ಅದರ ಮಣ್ಣಿನಿಂದ ಬೇರ್ಪಡಿಸಿರಲಿಲ್ಲ. ವರದಿಗಾರರು ಹೇಳುತ್ತಾರೆ: ಆಗ ಪ್ರವಾದಿಯವರು (ಅವರ ಮೇಲೆ ಅಲ್ಲಾಹುವಿನ ಕೃಪೆ ಮತ್ತು ಶಾಂತಿಯಿರಲಿ) ಅದನ್ನು ನಾಲ್ಕು ಜನರ ನಡುವೆ ಹಂಚಿದರು: ಉಯೈನ ಬಿನ್ ಬದ್ರ್ ಅಲ್-ಫಝಾರೀ, ಅಖ್ರಅ್ ಬಿನ್ ಹಾಬಿಸ್ ಅಲ್-ಹಂಝಲೀ, ಝೈದ್ ಅಲ್-ಖೈಲ್ ಅನ್ನಬ್‌ಹಾನೀ, ಮತ್ತು ಅಲ್ಕಮಾ ಇಬ್ನ್ ಉಲಾಸ ಅಲ್-ಆಮಿರೀ. ಆಗ ಅವರ ಸಹಾಬಿಗಳಲ್ಲಿ ಒಬ್ಬ ವ್ಯಕ್ತಿ ಹೇಳಿದರು: ಇವರಿಗಿಂತ ನಾವೇ ಇದಕ್ಕೆ ಹೆಚ್ಚು ಅರ್ಹರಾಗಿದ್ದೆವು. ವರದಿಗಾರರು ಹೇಳುತ್ತಾರೆ: ಈ ವಿಷಯವು ಪ್ರವಾದಿಯವರಿಗೆ (ಅವರ ಮೇಲೆ ಅಲ್ಲಾಹುವಿನ ಕೃಪೆ ಮತ್ತು ಶಾಂತಿಯಿರಲಿ) ತಲುಪಿತು. ಆಗ ಅವರು ಹೇಳಿದರು: "ನೀವು ನನ್ನನ್ನು ನಂಬುವುದಿಲ್ಲವೇ? ನಾನು ಆಕಾಶದಲ್ಲಿರುವವನ (ಅಲ್ಲಾಹುವಿನ) ನಂಬಿಗಸ್ಥ ದಾಸನಾಗಿದ್ದೇನೆ. ನನಗೆ ಆಕಾಶದ ಸುದ್ದಿ (ದಿವ್ಯಸಂದೇಶ) ಬೆಳಿಗ್ಗೆ ಮತ್ತು ಸಂಜೆ ಬರುತ್ತದೆ." ವರದಿಗಾರರು ಹೇಳುತ್ತಾರೆ: ಆಗ ಒಬ್ಬ ವ್ಯಕ್ತಿ ಎದ್ದು ನಿಂತನು - ಅವನ ಕಣ್ಣುಗಳು ಅವುಗಳ ಕುಳಿಗಳಲ್ಲಿ ಒಳಹೋಗಿದ್ದವು, ಕೆನ್ನೆಯ ಮೇಲ್ಭಾಗ ಎದ್ದುಕಾಣುತ್ತಿತ್ತು ಮತ್ತು ಉಬ್ಬಿತ್ತು, ಹಣೆ ಉಬ್ಬಿತ್ತು, ಅವನ ಗಡ್ಡ ದಟ್ಟವಾಗಿತ್ತು ಆದರೆ ಉದ್ದವಿರಲಿಲ್ಲ, ತಲೆ ಬೋಳಿಸಲಾಗಿತ್ತು, ಅವನ ದೇಹದ ಕೆಳಭಾಗವನ್ನು ಮುಚ್ಚುವ ಪಂಚೆಯನ್ನು ಮೇಲೆತ್ತಿ ಕಟ್ಟಲಾಗಿತ್ತು. ಅವನು ಹೇಳಿದನು: ಓ ಅಲ್ಲಾಹುವಿನ ಸಂದೇಶವಾಹಕರೇ, ಅಲ್ಲಾಹುವನ್ನು ಭಯಪಡಿರಿ. ಆಗ ಪ್ರವಾದಿಯವರು (ಅವರ ಮೇಲೆ ಅಲ್ಲಾಹುವಿನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ನಿನಗೆ ವಿನಾಶವಾಗಲಿ! ಭೂಮಿಯ ಜನರಲ್ಲಿ ಅಲ್ಲಾಹುವನ್ನು ಭಯಪಡಲು ಅತ್ಯಂತ ಅರ್ಹನಾದವನು ನಾನಲ್ಲವೇ?!" ವರದಿಗಾರರು ಹೇಳುತ್ತಾರೆ: ನಂತರ ಆ ವ್ಯಕ್ತಿ ಹೊರಟುಹೋದನು. ಖಾಲಿದ್ ಬಿನ್ ವಲೀದ್ ಹೇಳಿದರು: ಓ ಅಲ್ಲಾಹುವಿನ ಸಂದೇಶವಾಹಕರೇ, ನಾನು ಅವನ ಕುತ್ತಿಗೆಯನ್ನು ಕತ್ತರಿಸಿಬಿಡಲೇ? ಪ್ರವಾದಿಯವರು (ಅವರ ಮೇಲೆ ಅಲ್ಲಾಹುವಿನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: ಬೇಡ, ಬಹುಶಃ ಅವನು ನಮಾಝ್ ಮಾಡುವವನಾಗಿರಬಹುದು. ಆಗ ಖಾಲಿದ್ ಹೇಳಿದರು: ಎಷ್ಟೋ ನಮಾಝ್ ಮಾಡುವವರು ಇದ್ದಾರೆ, ಅವರು ತಮ್ಮ ಹೃದಯದಲ್ಲಿ ಇಲ್ಲದನ್ನು ತಮ್ಮ ನಾಲಿಗೆಯಿಂದ ಹೇಳುತ್ತಾರೆ. ಪ್ರವಾದಿಯವರು (ಅವರ ಮೇಲೆ ಅಲ್ಲಾಹುವಿನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: ನಾನು ಜನರ ಹೃದಯಗಳನ್ನು ಶೋಧಿಸಲು ಅಥವಾ ಅವರ ಹೊಟ್ಟೆಗಳನ್ನು ಸೀಳಲು ಆಜ್ಞಾಪಿಸಲ್ಪಟ್ಟವನಲ್ಲ; ನಾನು ಅವರ ಬಾಹ್ಯ ವಿಷಯಗಳ ಆಧಾರದ ಮೇಲೆ (ತೀರ್ಪು) ತೆಗೆದುಕೊಳ್ಳಲು ಮಾತ್ರ ಆಜ್ಞಾಪಿಸಲ್ಪಟ್ಟವನಾಗಿದ್ದೇನೆ. ವರದಿಗಾರರು ಹೇಳುತ್ತಾರೆ: ನಂತರ ಅವನು ಹಿಂತಿರುಗಿ ಹೋಗುತ್ತಿದ್ದಾಗ ಪ್ರವಾದಿಯವರು (ಅವರ ಮೇಲೆ ಅಲ್ಲಾಹುವಿನ ಕೃಪೆ ಮತ್ತು ಶಾಂತಿಯಿರಲಿ) ಅವನ ಕಡೆಗೆ ನೋಡಿ ಹೇಳಿದರು: ಖಂಡಿತವಾಗಿಯೂ ಈತನ ಸಂತತಿಯಿಂದ ಮತ್ತು ಅವನ ಸಹಚರರಿಂದ ಅಥವಾ ಅವನ ಗೋತ್ರದಿಂದ ಒಂದು ಗುಂಪು ಉದ್ಭವವಾಗುತ್ತದೆ. ಅವರು ಅಲ್ಲಾಹುವಿನ ಗ್ರಂಥವನ್ನು ಸುಂದರವಾದ ಧ್ವನಿಯಲ್ಲಿ ಪಠಿಸುವುದರಲ್ಲಿ ನಿಪುಣರಾಗಿರುತ್ತಾರೆ. ಅದನ್ನು ಹೆಚ್ಚಾಗಿ ಪಠಿಸುವುದರಿಂದ ಅವರ ನಾಲಿಗೆಗಳು ಒದ್ದೆಯಾಗಿರುತ್ತವೆ. ಆದರೆ ಕುರ್‌ಆನ್ ಅವರ ಗಂಟಲುಗಳನ್ನು ದಾಟುವುದಿಲ್ಲ. ಇದರಿಂದಾಗಿ ಅವರ ಹೃದಯಗಳು ಅದನ್ನು ಗ್ರಹಿಸಿ ಸುಧಾರಿಸುವುದಿಲ್ಲ. ಅಲ್ಲಾಹು ಅದನ್ನು ತನ್ನ ಬಳಿಗೆ ಏರಿಸುವುದಾಗಲಿ ಅಥವಾ ಸ್ವೀಕರಿಸುವುದಾಗಲಿ ಮಾಡುವುದಿಲ್ಲ. ಹೇಗೆ ಬಾಣವು ಲಕ್ಷ್ಯದಿಂದ ವೇಗವಾಗಿ ಮತ್ತು ಹಗುರವಾಗಿ ಹೊರಬೀಳುತ್ತದೆಯೋ ಹಾಗೆಯೇ ಅವರು ಇಸ್ಲಾಮಿನಿಂದ ಹೊರಬೀಳುತ್ತಾರೆ. ಮತ್ತು ಅವರು (ಪ್ರವಾದಿಯವರು) ಹೀಗೆ ಹೇಳಿದರು ಎಂದು ನಾನು (ಅಬೂ ಸಈದ್) ಭಾವಿಸುತ್ತೇನೆ: ಒಂದು ವೇಳೆ ಅವರು ಮುಸ್ಲಿಮರ ವಿರುದ್ಧ ಖಡ್ಗದಿಂದ ಬಂಡೆದ್ದರೆ, ಮತ್ತು ನಾನು ಆಗ ಜೀವಂತವಿದ್ದರೆ, ಖಂಡಿತವಾಗಿಯೂ ನಾನು ಅವರನ್ನು 'ಸಮೂದ್' ಜನಾಂಗವನ್ನು ಕೊಂದಂತೆ ಉಗ್ರವಾಗಿ ಕೊಲ್ಲುತ್ತೇನೆ.

ಹದೀಸಿನ ಪ್ರಯೋಜನಗಳು

  1. ಪ್ರವಾದಿಯವರ (ಅವರ ಮೇಲೆ ಅಲ್ಲಾಹುವಿನ ಕೃಪೆ ಮತ್ತು ಶಾಂತಿಯಿರಲಿ) ಸಹಿಷ್ಣುತೆ ಮತ್ತು ಕಿರುಕುಳದ ಸಂದರ್ಭದ ತಾಳ್ಮೆಯನ್ನು ವಿವರಿಸಲಾಗಿದೆ.
  2. ಪ್ರವಾದಿಯವರ (ಅವರ ಮೇಲೆ ಅಲ್ಲಾಹುವಿನ ಕೃಪೆ ಮತ್ತು ಶಾಂತಿಯಿರಲಿ) ಪ್ರವಾದಿತ್ವವನ್ನು ದೃಢೀಕರಿಸಲಾಗಿದೆ ಮತ್ತು ಅವರಿಗೆ ನೀಡಲ್ಪಟ್ಟಿದ್ದು ಅಲ್ಲಾಹುವಿನ ಕಡೆಯಿಂದ ಬಂದ ವಹೀ (ದಿವ್ಯ ಸಂದೇಶ) ಎಂದು ತಿಳಿಸಲಾಗಿದೆ.
  3. ಜನರೊಂದಿಗೆ ಅವರ ಬಾಹ್ಯ ವರ್ತನೆಯ ಆಧಾರದ ಮೇಲೆ ವ್ಯವಹರಿಸಲಾಗುತ್ತದೆ. ಅವರ ಅಂತರಂಗದ ವಿಷಯಗಳನ್ನು ಅಲ್ಲಾಹು ನೋಡಿಕೊಳ್ಳುತ್ತಾನೆ.
  4. ನಮಾಝ್‌ನ ಮಹತ್ವವನ್ನು ಎತ್ತಿ ಹಿಡಿಯಲಾಗಿದೆ. ನಮಾಝ್ ಮಾಡುವವರನ್ನು ಇಸ್ಲಾಮಿನ ಹಕ್ಕಿನ ಹೊರತು (ಅಂದರೆ ಶರೀಅತ್ ಪ್ರಕಾರ ಶಿಕ್ಷಾರ್ಹ ಅಪರಾಧ ಮಾಡಿದರೆ ಹೊರತು) ಕೊಲ್ಲಲಾಗುವುದಿಲ್ಲ ಎಂದು ತಿಳಿಸಲಾಗಿದೆ
  5. ಖವಾರಿಜ್‌ಗಳ ಅಪಾಯವನ್ನು ತಿಳಿಸಲಾಗಿದೆ. ಅವರು ಯುದ್ಧ ಮಾಡಿದರೆ, ಅವರ ಕಿರುಕುಳವನ್ನು ತಡೆಗಟ್ಟಲು ಅವರೊಂದಿಗೆ ಹೋರಾಡುವುದನ್ನು ನಿಯಮವಾಗಿ ಮಾಡಲಾಗಿದೆ.
  6. ಇಮಾಮ್ ನವವಿ ಹೇಳುತ್ತಾರೆ: "ಅವರೊಂದಿಗೆ (ಖವಾರಿಜ್‌ಗಳೊಂದಿಗೆ) ಹೋರಾಡಲು ಪ್ರೋತ್ಸಾಹಿಸಲಾಗಿದೆ. ಅವರೊಂದಿಗೆ ಹೋರಾಡಿದ ಅಲಿ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರವರ ಶ್ರೇಷ್ಠತೆಯನ್ನು ಇದು ತಿಳಿಸುತ್ತದೆ."
  7. 7. ಕುರ್‌ಆನ್ ಅನ್ನು ಚಿಂತಾರ್ಹವಾಗಿ ಅಧ್ಯಯನ ಮಾಡುವುದು, ಅರ್ಥಮಾಡಿಕೊಳ್ಳುವುದು, ಅದರಂತೆ ಕಾರ್ಯನಿರ್ವಹಿಸುವುದು ಮತ್ತು ಅದಕ್ಕೆ ಬದ್ಧವಾಗಿರುವುದರ ಮಹತ್ವವನ್ನು ತಿಳಿಸಲಾಗಿದೆ.
ಅನುವಾದಗಳನ್ನು ತೋರಿಸಿ
ಭಾಷೆ: ಆಂಗ್ಲ ಉರ್ದು ಸ್ಪ್ಯಾನಿಷ್ ಇನ್ನಷ್ಟು (42)
ಇನ್ನಷ್ಟು