عَنْ أَبِي هُرَيْرَةَ رَضِيَ اللَّهُ عَنْهُ قَالَ: قَالَ النَّبِيُّ صَلَّى اللهُ عَلَيْهِ وَسَلَّمَ:
«مَا مِنَ الأَنْبِيَاءِ نَبِيٌّ إِلَّا أُعْطِيَ مَا مِثْلهُ آمَنَ عَلَيْهِ البَشَرُ، وَإِنَّمَا كَانَ الَّذِي أُوتِيتُ وَحْيًا أَوْحَاهُ اللَّهُ إِلَيَّ، فَأَرْجُو أَنْ أَكُونَ أَكْثَرَهُمْ تَابِعًا يَوْمَ القِيَامَةِ».

[صحيح] - [متفق عليه] - [صحيح البخاري: 4981]
المزيــد ...

ಅಬೂ ಹುರೈರಾ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು:
"ಯಾವುದೇ ಪ್ರವಾದಿಯಿದ್ದರೂ, ಮನುಷ್ಯರು ಅವರ ಮೇಲೆ ವಿಶ್ವಾಸವಿಡುವಂತಹ ಪವಾಡಗಳನ್ನು (ದೃಷ್ಟಾಂತಗಳನ್ನು) ಅವರಿಗೆ ನೀಡಲಾಗಿತ್ತು. ಆದರೆ ನನಗೆ ನೀಡಲಾಗಿರುವುದು, ಅಲ್ಲಾಹು ನನಗೆ ಅವತೀರ್ಣಗೊಳಿಸಿದ ದಿವ್ಯವಾಣಿಯಾಗಿದೆ (ಕುರ್‌ಆನ್). ಆದಕಾರಣ, ಪುನರುತ್ಥಾನ ದಿನದಂದು ಅವರ ಪೈಕಿ ಅತಿ ಹೆಚ್ಚು ಅನುಯಾಯಿಗಳನ್ನು ಹೊಂದಿರುವವನು ನಾನಾಗಬೇಕು ಎಂದು ನಾನು ಆಶಿಸುತ್ತೇನೆ".

[صحيح] - [متفق عليه] - [صحيح البخاري - 4981]

ವಿವರಣೆ

ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ತಿಳಿಸಿರುವುದೇನೆಂದರೆ, ಅಲ್ಲಾಹು ಎಲ್ಲಾ ಪ್ರವಾದಿಗಳನ್ನು ಬೆಂಬಲಿಸಿದನು ಮತ್ತು ಅವರಿಗೆ ದೃಷ್ಟಾಂತಗಳನ್ನು ಹಾಗೂ ಪವಾಡಗಳನ್ನು ನೀಡಿದನು. ಅದನ್ನು ನೋಡಿದವರು ಪ್ರವಾದಿಗಳ ಸತ್ಯಸಂಧತೆಯಲ್ಲಿ ವಿಶ್ವಾಸವಿಡುವಂತಾಗಿತ್ತು. ಅವುಗಳನ್ನು ಯಾರೂ ಸೋಲಿಸಲು ಅಥವಾ ತಡೆಯಲು ಸಾಧ್ಯವಿರಲಿಲ್ಲ. ಆದರೆ ಪ್ರವಾದಿಯವರಿಗೆ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ನೀಡಲಾದ ವಿಶೇಷ ದೃಷ್ಟಾಂತ ಮತ್ತು ಪವಾಡವು ಕುರ್‌ಆನ್ ಆಗಿದೆ. ಇದನ್ನು ಅಲ್ಲಾಹು ಅವರಿಗೆ ದಿವ್ಯವಾಣಿಯ ಮೂಲಕ ನೀಡಿದ್ದಾನೆ. ಇದು ಸ್ಪಷ್ಟವಾದ ಮತ್ತು ಶಾಶ್ವತವಾದ ಪವಾಡವಾಗಿದ್ದು, ಇದರ ಪ್ರಯೋಜನಗಳು ಅಪಾರವಾಗಿವೆ ಮತ್ತು ಸಾರ್ವತ್ರಿಕವಾಗಿವೆ. ಇದು ಧರ್ಮಪ್ರಚಾರ, ಸಾಕ್ಷ್ಯ ಮತ್ತು ಭವಿಷ್ಯದಲ್ಲಿ ಸಂಭವಿಸುವ ಸಂಗತಿಗಳನ್ನು ಒಳಗೊಂಡಿದೆ. ಇದರ ಪ್ರಯೋಜನವು ಜೀವಂತವಿರುವವರಿಗೆ, ಇಲ್ಲದವವರಿಗೆ ಮತ್ತು ಮುಂದೆ ಹುಟ್ಟಲಿರುವವರಿಗೂ ದೊರೆಯುತ್ತದೆ. ನಂತರ ಅವರು ಹೇಳಿದರು: "ಆದ್ದರಿಂದ ತೀರ್ಪು ನೀಡುವ ದಿನದಂದು ಅತಿ ಹೆಚ್ಚು ಅನುಯಾಯಿಗಳನ್ನು ಹೊಂದಿರುವವನು ನಾನಾಗುವೆನೆಂದು ಆಶಿಸುತ್ತೇನೆ."

ಹದೀಸಿನ ಪ್ರಯೋಜನಗಳು

  1. ಪ್ರವಾದಿಗಳಿಗೆ ದೃಷ್ಟಾಂತಗಳನ್ನು (ಪವಾಡಗಳನ್ನು) ನೀಡಲಾಗಿತ್ತು ಎಂಬುದನ್ನು ಇದು ದೃಢಪಡಿಸುತ್ತದೆ. ಇದು ಸಮುದಾಯಗಳ ಮೇಲೆ ಅಲ್ಲಾಹನ ಕರುಣೆ ಮತ್ತು ಅನುಗ್ರಹವಾಗಿದೆ.
  2. ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಪವಾಡದ ಮಹತ್ವವನ್ನು ಇದು ವಿವರಿಸುತ್ತದೆ.
  3. ಇತರ ಪ್ರವಾದಿಗಳಿಗಿಂತ ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಸ್ಥಾನಮಾನ ಮತ್ತು ಶ್ರೇಷ್ಠತೆಯನ್ನು ಇದು ತೋರಿಸುತ್ತದೆ.
  4. ಇಬ್ನ್ ಹಜರ್ ಹೇಳುತ್ತಾರೆ: "ಆದರೆ ನನಗೆ ನೀಡಲಾಗಿರುವುದು, ಅಲ್ಲಾಹು ನನಗೆ ಅವತೀರ್ಣಗೊಳಿಸಿದ ದಿವ್ಯವಾಣಿಯಾಗಿದೆ" ಎಂಬ ಮಾತಿನ ಅರ್ಥವೇನೆಂದರೆ, ಅವರ ಪವಾಡಗಳು ಕೇವಲ ಇದಕ್ಕೆ (ಕುರ್‌ಆನ್‌ಗೆ) ಸೀಮಿತ ಎಂದಲ್ಲ. ಅಥವಾ ಹಿಂದಿನವರಿಗಿದ್ದಂತಹ ಪವಾಡಗಳು ಇವರಿಗಿರಲಿಲ್ಲ ಎಂದಲ್ಲ. ಬದಲಾಗಿ, ಇದು ಇತರರಿಗಿಂತ ಭಿನ್ನವಾಗಿ ಇವರಿಗೆ ಮಾತ್ರ ನೀಡಲಾದ ಅತ್ಯುನ್ನತ ಪವಾಡವಾಗಿದೆ.
  5. ನವವಿ ಹೇಳುತ್ತಾರೆ: "(ಅತಿ ಹೆಚ್ಚು ಅನುಯಾಯಿಗಳನ್ನು ಹೊಂದಿರುವವನು ನಾನಾಗಲಿರುವೆ) ಎಂಬ ಮಾತು ಪ್ರವಾದಿತ್ವದ ಕುರುಹುಗಳಲ್ಲಿ ಒಂದಾಗಿದೆ. ಮುಸ್ಲಿಮರ ಸಂಖ್ಯೆ ಬಹಳ ಕಡಿಮೆಯಿದ್ದ ಕಾಲದಲ್ಲಿ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಈ ಮಾತನ್ನು ಹೇಳಿದ್ದರು. ನಂತರ ಅಲ್ಲಾಹು ಮುಸ್ಲಿಮರಿಗೆ ವಿಜಯ ನೀಡಿದನು ಮತ್ತು ಅವರಲ್ಲಿ ಅಭಿವೃದ್ಧಿ (ಬರಕತ್) ನೀಡಿದನು. ಇಂದು ನಮಗೆ ತಿಳಿದಿರುವಂತೆ ಇಸ್ಲಾಂ ಧರ್ಮವು ಈ ಹಂತದವರೆಗೆ ವಿಶಾಲವಾಗಿ ಹರಡಿದೆ. ಅಲ್-ಹಮ್ದುಲಿಲ್ಲಾಹ್."
ಅನುವಾದ: ಆಂಗ್ಲ ಇಂಡೋನೇಷಿಯನ್ ಬಂಗಾಳಿ ರಷ್ಯನ್ ಸಿಂಹಳೀಯ ವಿಯೆಟ್ನಾಮೀಸ್ ಟ್ಯಾಗಲಾಗ್ ಕುರ್ದಿಷ್ ಹೌಸಾ ಪೋರ್ಚುಗೀಸ್ ಮಲಯಾಳಂ ಸ್ವಾಹಿಲಿ ಥಾಯ್ الأسامية الهولندية الغوجاراتية الدرية المجرية الجورجية المقدونية الخميرية البنجابية الماراثية
ಅನುವಾದಗಳನ್ನು ತೋರಿಸಿ
ಇನ್ನಷ್ಟು